ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅನುಭವಿ ಬ್ಯಾಟರ್ ಹಾಗೂ ಮಾಜಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಭಾರತ ತಂಡದ ಶಾಂತ, ಸಂಯಮ ಹಾಗೂ ನಂಬಿಕಸ್ಥ ಬ್ಯಾಟರ್ ಎಂದೇ ಅಜಿಂಕ್ಯ ರಹಾನೆ ಅವರನ್ನು ಗುರುತಿಸಲಾಗಿತ್ತು. ಭಾರತೀಯ ಕ್ರಿಕೆಟ್ನ ಸುವರ್ಣ ಯುಗವೊಂದು ಅಂತ್ಯಗೊಂಡಿದ್ದು, ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿರುವ ರಹಾನೆ, ಸಾಮಾನ್ಯ ಹಿನ್ನೆಲೆಯಿಂದ ಬಂದು ಜಗತ್ತಿನ ಬೃಹತ್ ವೇದಿಕೆಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವ ಹಂತಕ್ಕೆ ಬೆಳೆದಿದ್ದು ನನ್ನ ಪಾಲಿಗೆ ಸಿಕ್ಕ ಅತ್ಯಂತ ದೊಡ್ಡ ಸೌಭಾಗ್ಯ. ನನ್ನನ್ನು ಇಂದು ಈ ಮಟ್ಟದ ವ್ಯಕ್ತಿಯನ್ನಾಗಿ ರೂಪಿಸಲು ಮೌಲ್ಯಯುತ ಕೊಡುಗೆ ನೀಡಿದ ನನ್ನ ಎಲ್ಲಾ ತರಬೇತುದಾರರು, ಮಾರ್ಗದರ್ಶಕರು, ಸಹ ಆಟಗಾರರು ಮತ್ತು ಪೋಷಕ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
https://www.instagram.com/reel/DbZ1f0-tcFB/?utm_source=ig_embed&ig_rid=AkW0sHKnS8c0gKVpvsCy6cD
ಜೀವನದ ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯ ಇರುತ್ತದೆ. ಸಮಯ ಬಂದಾಗ ಅದನ್ನು ಗೌರವಿಸಿ ಮುನ್ನಡೆಯಬೇಕು. ನನ್ನ ಬ್ಯಾಟಿಂಗ್ನಲ್ಲಿ ನಾನು ಯಾವಾಗಲೂ ಸಮಯಕ್ಕೆ ಆದ್ಯತೆ ನೀಡಿದ್ದೆ. ಈಗ ನನ್ನ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಚಿಕ್ಕ ವಯಸ್ಸಿನಿಂದಲೂ ಪ್ರತಿ ದಿನ, ಪ್ರತಿ ಇನ್ನಿಂಗ್ಸ್ನಲ್ಲಿ ಭಾರತದ ಕ್ಯಾಪ್ ಧರಿಸುವುದೇ ನನ್ನ ಏಕೈಕ ಕನಸಾಗಿತ್ತು.
ದೇಶ ಮತ್ತು ತಂಡಕ್ಕೆ ಯಾವಾಗಲೂ ಮೊದಲ ಆದ್ಯತೆ ನೀಡಿ ಸಂಪೂರ್ಣ ಪ್ರಾಮಾಣಿಕತೆಯಿಂದ ಆಡಿದ್ದೇನೆ. ರಣಜಿ ಪಂದ್ಯದಿಂದ ಹಿಡಿದು ಕಳೆದ 20 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಬೆಳೆದ ರೀತಿ ಕಂಡು ಹೆಮ್ಮೆಯಾಗುತ್ತದೆ. ಭಾರತೀಯ ಕ್ರಿಕೆಟಿಗನಾಗಿ ನನ್ನ ಅಧ್ಯಾಯ ಮುಗಿದಿರಬಹುದು, ಆದರೆ ಕ್ರಿಕೆಟ್ ಜೊತೆಗಿನ ಪಯಣ ಮುಗಿಯುವುದಿಲ್ಲ. ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ ಎಂದಿದ್ದಾರೆ.



