ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಎರಡು ದಿನಗಳ ಭೇಟಿಗಾಗಿ ರಷ್ಯಾದ ಮಾಸ್ಕೋಗೆ ತೆರಳಿದ್ದಾರೆ. ಅವರು ತಮ್ಮ ಭೇಟಿಯ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ, ಇಂಧನ ಭದ್ರತೆ, ರಕ್ಷಣಾ ಸಂಬಂಧಗಳು, ಭಯೋತ್ಪಾದನೆ ನಿಗ್ರಹ ಮತ್ತು ಉಕ್ರೇನ್ನಲ್ಲಿನ ಯುದ್ಧದ ಕುರಿತು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತಾಗಿ ಚರ್ಚಿಸಲಿದ್ದಾರೆ.
ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಭದ್ರತಾ ಸಭೆಯಲ್ಲಿ ಭಾಗವಹಿಸಲು ಮತ್ತು ಸೆಪ್ಟೆಂಬರ್ನಲ್ಲಿ ಸಮರ್ಕಂಡ್ನಲ್ಲಿ ನಡೆಯಲಿರುವ ಎಸ್ಸಿಒ ಶೃಂಗಸಭೆಗೆ ತಯಾರಿ ನಡೆಸಲು ಗುರುವಾರ ಮತ್ತು ಶುಕ್ರವಾರ ದೋವಲ್ ಉಜ್ಬೇಕಿಸ್ತಾನ್ಗೆ ಭೇಟಿ ನೀಡಲಿದ್ದಾರೆ. ಆದರೆ ಅದಕ್ಕೂ ಮೊದಲು ಮಾಸ್ಕೋಗೆ ಎನ್ಎಸ್ಎ ದೋವಲ್ ಆಗಮನವಾಗಿದೆ.
ಮಾಸ್ಕೋದಲ್ಲಿ, NSA ದೋವಲ್ ರಷ್ಯಾದ ನಿಕೊಲಾಯ್ ಪಟ್ರುಶೆವ್ ಸೇರಿದಂತೆ ರಷ್ಯಾದ ನಾಯಕತ್ವದೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ.
ಅಪ್ಘಾನ್ ನಲ್ಲಿ ಶಾಂತಿಸ್ಥಾಪನೆಗೆ ಮತ್ತು ಅಲ್ಲಿನ ಸ್ಥಳೀಯರಿಗೆ ಶಕ್ತಿ ತುಂಬಲು ಭಾರತವು ಮಾನವೀಯ ನೆರವು ಮತ್ತು ಸಹಾಯವನ್ನು ಕಳಿಸುತ್ತಿದೆ. ಆದರೆ ಅಲ್ಲಿ ಸಾಧಿಸಬೇಕಾದದ್ದು ಇನ್ನೂ ಕಾರ್ಯ ರೂಪಕ್ಕಿಳಿದಿಲ್ಲ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆ, ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿಯ ಕುರಿತಾಗಿ ಅಫ್ಘಾನಿಸ್ತಾನದ ಭದ್ರತಾ ಪರಿಸ್ಥಿತಿಯನ್ನು ಉಭಯ ಕಡೆಯವರು ಚರ್ಚಿಸಲಿದ್ದಾರೆ.