ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಒಂದಾಗಿ ಮೈತ್ರಿ ಮಾಡಿಕೊಂಡಿದೆ. 26ಕ್ಕೂ ಹೆಚ್ಚು ಪಕ್ಷಗಳು ಈಗಾಗಲೇ ಸಭೆಗಳನ್ನು ನಡೆಸಿ ಚುನಾವಣಾ ರಣತಂತ್ರ ರೂಪಿಸಿದೆ.
ಆದರೆ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನವೇ ಮೈತ್ರಿಯಲ್ಲಿ ಅಸಮಾಧಾನ ಶುರುವಾಗಿದೆ. ಈಗಾಗಲೇ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಸೀಟು ಹಂಚಿಕೆ ಕುರಿತು ಅಸಮಾಧಾನ ಹೊರಹಾಕಿದ್ದರು.ಇದೀಗ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಕುತಂತ್ರದ ಪಕ್ಷ, ನಮಗೆ ಮೋಸ ಮಾಡಿದೆ. ಯಾರೂ ನಂಬಬೇಡಿ, ಮತ ಹಾಕಬೇಡಿ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅಖಿಲೇಶ್ ಯಾದವ್, ಕಾಂಗ್ರೆಸ್ ಅತ್ಯಂತ ಕುತಂತ್ರದ ಪಕ್ಷ. ಮಧ್ಯಪ್ರದೇಶದ ಜನ ಕಾಂಗ್ರೆಸ್ ನಂಬಿ ಮತ ಹಾಕಬೇಡಿ. ಮೈತ್ರಿ ಹೆಸರಿನಲ್ಲಿ ಕಾಂಗ್ರೆಸ್ ನಮಗೆ ಮೋಸ ಮಾಡಿದೆ. ಇನ್ನು ಜನರಿಗೆ ಮೋಸ ಮಾಡುವುದು ಕಾಂಗ್ರೆಸ್ ಗೆ ಕಷ್ಟದ ಕೆಲಸವಲ್ಲ. ಕಾಂಗ್ರೆಸ್ ಪದೇ ಪದೇ ಜಾತಿಗಣತಿ ಸಮೀಕ್ಷೆಗೆ ಆಗ್ರಹಿಸುತ್ತಿದೆ. ಆದರೆ ತನ್ನ ಮತಕ್ಕಾಗಿ ಜಾತಿಗಣತಿ ಮಾಡಿಸುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ಸತತವಾಗಿ ಕಾಂಗ್ರೆಸ್ ವಿರುದ್ದ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಿಂದ I.N.D.I.A ಒಕ್ಕೂಟ ಮೈತ್ರಿಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ.