ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಾದಿತ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಲಿದೆ. ಈ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಹಿಂದೂ ಧರ್ಮೀಯರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ತೀರ್ಪನ್ನು ಇಂದಿಗೆ ಮುಂದೂಡಿದೆ. ಮಸೀದಿಯಲ್ಲಿ ಪೂಜೆಗೆ ಅನುಮತಿ ನೀಡುವ ಕುರಿತು ನಡೆಯುತ್ತಿರುವ ವಿಚಾರಣೆ ಸ್ವೀಕಾರಾರ್ಹವೇ ಮತ್ತು ಇದಕ್ಕೆ ಕಾನೂನು ಕಾರಣಗಳೇನು ಎಂಬ ಬಗ್ಗೆ ವಾರಣಾಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಲಿದ್ದಾರೆ.
ಆಗಸ್ಟ್ 24ರಂದು ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಸೆಪ್ಟೆಂಬರ್ 12ಕ್ಕೆ ಕಾಯ್ದಿರಿಸಿತು. ಆದರೆ ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ, ಕೆಲವರು ಮಾಡಿರುವ ಆರೋಪ ಸುಳ್ಳು, ಮಸೀದಿಯ ಜಮೀನು ಸೇರಿದಂತೆ ಉಳಿದ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಮಸೀದಿ ಸಮಿತಿ ಅಫಿಡವಿಟ್ ಸಲ್ಲಿಸಿದೆ. ಇದರ ಜೊತೆಗೆ ಈ ಬಗ್ಗೆ ಯಾವುದೇ ವಾದಗಳನ್ನು ಆಲಿಸುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇದ್ದು, ಅದಕ್ಕೆ ಮಾತ್ರ ಆ ಹಕ್ಕು ನೀಡಬೇಕು ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿದೆ ಮತ್ತು ಶಿವಲಿಂಗವನ್ನು ಪೂಜಿಸಲು ಅವಕಾಶ ನೀಡಬೇಕು ಎಂದು ಕೆಲವು ಹಿಂದೂ ಧರ್ಮೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಿಂದೂ-ಮುಸ್ಲಿಂ ವಿವಾದಗಳ ಮಧ್ಯೆ, ನ್ಯಾಯಾಲಯವು ಮಸೀದಿಯ ಸಮೀಕ್ಷೆಗೆ ಸಮಿತಿಯನ್ನು ನೇಮಿಸಿತು. ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ವಾರಣಾಸಿ ನ್ಯಾಯಾಲಯ ತೀರ್ಪು ನೀಡಲಿದೆ.