ಹೊಸದಿಗಂತ ವರದಿ ಹುಬ್ಬಳ್ಳಿ:
ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಬೃಹತ್ ಸಮಾವೇಶವನ್ನು ಅ.2 ಮತ್ತು 3,2023ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಕುರುಬ ಸಮಾಜದ 12 ಕೋಟಿ ಜನ ಸಂಖ್ಯೆ ಇದ್ದರೂ ಸಹ ರಾಜಕೀಯ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಹಿಂದೆ ಇರುವುದು ದುರದೃಷ್ಟ ಸಂಗತಿಯಾಗಿದೆ ಎಂದರು.
ಸದ್ಯ ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ವತಿಯಿಂದ ಕುರುಬ ಸಮಾಜವನ್ನು ಸಂಘಟನೆಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಹಿನ್ನೆಲೆ ದೇಶದಲ್ಲಿ ಸಮಾಜ ಬಲಿಷ್ಠಗೊಳಿಸುವ ಉದ್ದೇಶದಿಂದ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಅ.3 ರಂದು ಸಮಾಜದಿಂದ ಎರಡು ಬಾರಿ ಆಯ್ಕೆಯಾದ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಮೆಚ್ಚಿ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾವೇಶಕ್ಕೆ ಹರಿಯಾಣ, ಮಹಾರಾಷ್ಟ್ರ, ಗೋವಾ, ತಮಿಳುನಾಡ, ಆಂಧ್ರಪ್ರದೇಶ ದೇಶದ ವಿವಿಧ ರಾಜ್ಯದ ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಜಯಪುರ ಧಾರವಾಡ ಸೇರಿ ಸುಮಾರು 1 ಲಕ್ಷ ಕುರುಬ ಸಮಾಜದ ಜನರು ಸೇರುವ ನಿರೀಕ್ಷೆ ಇದೆ. ರಾಜ್ಯಾದ್ಯಂತ ಸಭೆಗಳ ನಡೆಸಿ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಶೇಫಡ್ಸ ಇಂಡಿಯಾ ಇಂಟರ್ ನ್ಯಾಶನಲ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ವಿಶ್ವನಾಥ ಮಾತನಾಡಿ, ಕುರುಬ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ 2014 ರಿಂದ ಮಹತ್ಮಾ ಗಾಂಧಿ ಜಯಂತಿ ದಿನದಂದು ಶೇಫಡ್ಸ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಆರಂಭಿಸಲಾಗಿದೆ. ಜನತಂತ್ರ ವ್ಯವಸ್ಥೆ ರಾಜಕಾರಣಕ್ಕೆ ಜನಶಕ್ತಿ ಅವಶ್ಯಕತೆ ಇದೆ. ರಾಜಕೀಯವಾಗಿ ಸಮಾಜವು ಬೆಳೆದಾಗ ನಾವು ಬೆಳೆಯಲು ಸಾಧ್ಯ ಎಂದರು.
ಸಮಾಜದ ಮುಖಂಡರಾದ ಲೋಹಿತ್ ನಾಯಕರ, ನಾಗರಾಜ ಗುರಿಕಾರ, ಯೋಗಪ್ಪ ದಾಯಗವಾಡಿ, ಸಿದ್ದ ತೇಜಿ ಇದ್ದರು.