ರಾಜನಿಗೆ ಹೆಚ್ಚು ಹಣ ಬೇಕು, ಆಸ್ತಿ ಬೇಕು, ವಜ್ರ ವೈಡೂರ್ಯ ಬೇಕು. ಬಡವರಿಗೆ ಚಿನ್ನದ ನಾಣ್ಯಗಳನ್ನು ಆಗಾಗ ಎಸೆಯಬೇಕು. ಇದೆಲ್ಲಾ ಮಾಡದೇ ಹೋದರೆ ಅವನೆಂಥಾ ರಾಜ? ಮೈಮೇಲೆ ಚಿನ್ನದ ಅಂಗಡಿ ಇಲ್ಲ ಎಂದರೆ ಆತನನ್ನು ಯಾರೂ ಪ್ರೀತಿಸುವುದಿಲ್ಲ ಎನ್ನುವುದು ಅವನ ವಾದವಾಗಿತ್ತು.
ರಾಜನೇನೋ ಒಳ್ಳೆಯವನೇ ಆದರೆ ದುರಾಸೆ. ಇನ್ನೂ ಚಿನ್ನ ಬೇಕು ಎಂದು ತಪಸ್ಸಿಗೆ ಕುಳಿತ. ಅಷ್ಟು ಕಠಿಣ ತಪಸ್ಸು ಮಾಡಿದಮೇಲೆ ದೇವರು ಬರದಿದ್ರೆ ಹೇಗೆ? ದೇವರು ಬಂದ ಏನು ಬೇಕು ಮಗು ಎಂದು ಕೇಳಿತು. ರಾಜ ಕಿಂಚಿತ್ತೂ ಯೋಚಿಸದೇ ನಾನು ಮುಟ್ಟಿದ್ದೆಲ್ಲಾ ಚಿನ್ನ ಆಗಿಬಿಡಬೇಕು ಅಂಥಾ ವರಕೊಡಿ ಎಂದ. ದೇವರು ಇದು ಮುಂದೆ ಸಮಸ್ಯೆ ಆಗುತ್ತದೆ ಎನ್ನುವುದನ್ನು ಅರಿತು ಇನ್ನೊಮ್ಮೆ ಯೋಚಿಸು ಎಂದು ಹೇಳಿತು. ಅದಕ್ಕೆ ರಾಜ, ಇರಲಿ ಪರವಾಗಿಲ್ಲ. ನನ್ನ ಅರಮನೆಯನ್ನೇ ಚಿನ್ನದ ಅರಮನೆ ಮಾಡ್ಕೋತೀನಿ ವರ ಕೊಡಿ ಎಂದು ಕೇಳಿಕೊಂಡ.
ಇಷ್ಟು ಹಠ ಮಾಡಿದಮೇಲೆ ದೇವರು ಇನ್ನೇನು ಮಾಡಲು ಸಾಧ್ಯ, ಸರಿ ತಥಾಸ್ತು ನಿನ್ನಿಷ್ಟ ಎಂದು ಹೇಳಿಬಿಟ್ಟರು. ತಗೋ ರಾಜನ ಖುಷಿಗೆ ಪಾರವೇ ಇಲ್ಲ. ಮನಸ್ಸೆಲ್ಲಾ ಉಲ್ಲಾಸ, ತನ್ನ ರೂಮಿಗೆ ಬಂದು ಮಂಚ ಮುಟ್ಟಿದ, ಮಂಚ ಚಿನ್ನದ್ದಾಯ್ತು. ತನ್ನ ರೂಮಿನ ಎಲ್ಲಾ ವಸ್ತುವನ್ನು ಒಂದೊಂದೇ ಮುಟ್ಟತೊಡಗಿದೆ. ಎಲ್ಲವೂ ಚಿನ್ನ. ಇದೇ ಆಟ ಆಡುತ್ತಾ ಅರ್ಧ ಅರಮನೆ ಚಿನ್ನದ್ದಾಯ್ತು.
ಅರಮನೆ ಇಡೀ ಸುತ್ತಿ ಸುಸ್ತಾದ ರಾಜನಿಗೆ ನೀರು ಬೇಕಿತ್ತು. ಹೂಜಿ ಎತ್ತಿ ನೀರು ಕುಡಿಯಲು ಹೊರಟ, ನೀರು ಚಿನ್ನವಾಗಿ ಗಟ್ಟಿಯಾಯ್ತು, ಅನ್ನ ತಿನ್ನಲು ಹೋದ ಅದು ಚಿನ್ನದ ಕಾಳಾಯ್ತು. ಇದೀಗ ರಾಜ ಪೇಚಿಗೆ ಸಿಲುಕಿದ್ದ. ಒಂದು ಹನಿಯೂ ಕುಡಿಯಲಾರದೆ ರಾಜ ದುಃಖಿತನಾದ. ರೂಂ ಬಿಡದೇ ಸೇರಿಕೊಂಡ. ತಿಂಗಳಾದರೂ ಯಾರಿಗೂ ಏನೂ ಹೇಳದೇ ರೂಂ ಒಳಗೆ ಹೋಗಿಬಿಟ್ಟ.
ತಿಂಗಳ ನಂತರ ತನ್ನ ಮಗಳು ವಿದ್ಯಾಭ್ಯಾಸ ಮುಗಿಸಿ ಬಂದಳು. ಅಪ್ಪನನ್ನು ನೋಡಲು ಬಾಗಿಲು ತೆಗೆದಳು, ಅಪ್ಪ ಎಂದು ತಬ್ಬಿಕೊಳ್ಳಲು ಮುಂದಾದಳು, ನನ್ನನ್ನು ಮುಟ್ಟಬೇಡ ಎಂದು ಅಪ್ಪ ಕೂಗಿದ. ಅಷ್ಟರೊಳಗೆ ಮಗಳು ಅಪ್ಪನನ್ನು ತಬ್ಬಿದಳು ಅವಳೂ ಚಿನ್ನವಾದಳು!
ಸುಖವಾಗಿದ್ದ ಬದುಕನ್ನು ಆಸಗೆ ಬಿದ್ದು ರಾಜ ಇನ್ನೂ ಕಠಿಣ ಮಾಡಿಕೊಂಡ. ಚಿನ್ನದ ಆಸೆಗೆ ಚಿನ್ನದಂಥ ಮಗಳನ್ನೇ ಕಳೆದುಕೊಂಡ, ಈಗ ಹೇಳಿ ಅತಿಯಾಸೆ ಒಳ್ಳೆಯದಾ?