ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ಜಾರಿಗೆ ಮಾಡಿರುವ ಪ್ರಣಾಳಿಕೆ ಸುಳ್ಳಿನ ಕಂತೆಯಾಗಿದೆ. ಆಕಾಶ ಮತ್ತು ಪಾತಾಳವನ್ನು ಒಂದು ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನೋಡಿದರೆ ಅವರು 40ವರ್ಷ ಅಧಿಕಾರ ಮಾಡಿದ್ದು, ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬುದು ಅರಿವಾಗುತ್ತದೆ ಎಂದರು. ದುರಾಡಳಿತ ಮಾಡಿ ಚುನಾವಣೆ ಹತ್ತಿರ ಬಂದಾಗ ಜನರಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರೈತರು, ದಲಿತರ ಹೆಸರಿನಲ್ಲಿ ಸುಳ್ಳು ಹೇಳುತ್ತಿದೆ ಎಂದು ಹರಿಹಾಯ್ದರು.
ಈ ಹಿಂದೆ ಉತ್ತರಖಂಡದಲ್ಲಿ ಸಹ ಇದೇ ತರಹ ಕಾಂಗ್ರೆಸ್ ಸುಳ್ಳು ಭರವಸೆ ನೀಡಿತ್ತು. ಅದರೆ ಅಲ್ಲಿನ ಜನರು ಸೊಪ್ಪು ಹಾಕದೇ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕೂಡಾ ಜನರು ಕಾಂಗ್ರೆಸ್ನ ಸುಳ್ಳು ಭರವಸೆಯನ್ನು ಜನರು ನಂಬುವುದಿಲ್ಲ ಎಂದರು.
ಇದೀಗ ಮುಸ್ಲಿಂ ಮೀಸಲಾತಿ ತರತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಮುಸ್ಲಿಂ ಮೀಸಲಾತಿ ಜಾರಿಗೆ ತರೋದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ಕೂಡಾ ಕಾಂಗ್ರೆಸ್ ಮತಬ್ಯಾಂಕ್ಗಾಗಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಒಂದು ವೇಳೆ ಬಂದಲ್ಲಿ ಮುಸ್ಲಿಂ ಮೀಸಲಾತಿ ಜಾರಿಗೆ ನಾವು ತೀವ್ರವಾಗಿ ವಿರೋಧ ಮಾಡುತ್ತೇವೆ ಎಂದರು.