ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶಿಯ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಗೆ ಮುಸ್ಲಿಂ ಪಕ್ಷವು ತಂದಿದ್ದ ತಡೆಯನ್ನು ಗುರುವಾರ ಅಲಹಾಬಾದ್ ಹೈಕೋರ್ಟ್ ತೆರವುಗೊಳಿಸಿದೆ. ಇದರೊಂದಿಗೆ, ಪುರಾತತ್ವ ಇಲಾಖೆಯು ಜ್ಞಾನವಾಪಿ ಪ್ರಾಂಗಣದಲ್ಲಿ ಸಮೀಕ್ಷೆ ಮುಂದುವರಿಸಬಹುದಾಗಿದೆ.
“ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್ಐ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ” ಎಂದು ಹಿಂದು ಪರವಾಗಿ ವಾದ ಮಂಡಿಸಿದ ವಿಷ್ಣು ಶಂಕರ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಸಂಕೀರ್ಣದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್ಐ) ಸಮೀಕ್ಷೆಯನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಕೆಲದಿನಗಳ ಹಿಂದೆ ಸುಪ್ರೀಂಕೋರ್ಟಿಗೆ ಹೋಗಿತ್ತು. ಆಗ ತತ್ ಕ್ಷಣಕ್ಕೆ ಸಮೀಕ್ಷೆಗೆ ತಡೆ ನೀಡಿದ್ದ ಸುಪ್ರೀಂಕೋರ್ಟ್, ಮುಸ್ಲಿಂ ಪಕ್ಷದ ಅಳಲನ್ನು ಹೈಕೋರ್ಟ್ ಪರಿಶೀಲಿಸಿ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಿ ಎಂದು ಅದಕ್ಕೆ ಸಮಯಮಿತಿಯನ್ನೂ ಹಾಕಿತ್ತು.
ಇದೀಗ, ಅಲಹಾಬಾದ್ ಹೈಕೋರ್ಟ್ ನೀಡಿರುವ ನಿರ್ದೇಶನವು ಸಮೀಕ್ಷೆಗೆ ಇರುವ ತಡೆಯನ್ನು ತೆಗೆದುಹಾಕಿದೆ. ಹೀಗಾಗಿ ಪುರಾತತ್ವ ಇಲಾಖೆ ಈ ಕ್ಷಣಕ್ಕೇ ಜ್ಞಾನವಾಪಿ ಪ್ರಾಂಗಣದಲ್ಲಿ ಮತ್ತೆ ಸಮೀಕ್ಷೆ ಪ್ರಾರಂಭಿಸಬಹುದು.
ಈ ಸಮೀಕ್ಷೆಯಲ್ಲಿ ಉತ್ಖನನ ಮಾಡುವಂತಿಲ್ಲ. ಮಸೀದಿ ಪ್ರಾಂಗಣದಲ್ಲಿ ಪತ್ತೆಯಾಗಿರುವ ಶಿವಲಿಂಗವೆಂದು ಹೇಳಲಾಗುವದರ ಕುರಿತೂ ಈ ಸಮೀಕ್ಷೆ ಕಾರ್ಯವ್ಯಾಪ್ತಿ ಹೊಂದಿಲ್ಲ.