ಹೊಸದಿಗಂತ ವರದಿ ಹುಬ್ಬಳ್ಳಿ:
ಕಲಿಕೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನುಷ್ಯನ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದರಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸುತ್ತಾರೆ ಎಂದು ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಆನಂದ ನಾಡಗೇರ ಹೇಳಿದರು.
ಮಂಗಳವಾರ ವಿದ್ಯಾನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾ ಹಾಗೂ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ವ್ಯಕ್ತಿಯ ಸಮಗ್ರ ಬೆಳವಣಿಗೆಯಲ್ಲಿ ಕ್ರೀಡೆಯ ಪಾತ್ರ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಅಕಾಡೆಮಿಗೆ ಮಾತ್ರ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಕಲಿಕೆ ಹಾಗೂ ಕ್ರೀಡೆ ಚಟುವಟಿಕೆಗಳನ್ನು ಸಮಾನವಾಗಿ ಕಾಣಬೇಕು. ಒಬ್ಬ ಉತ್ತಮ ಕ್ರೀಡಾಪಟು ಆಗಲು ನಿರಂತರ ಅಭ್ಯಾಸ, ಪೌಷ್ಠಿಕ ಆಹಾರ ಸೇವನೆ, ಡಯಟ್ ಮಾಡಬೇಕು ಎಂದರು.
ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯದ ನಿವೃತ್ತ ಮೌಲ್ಯಮಾಪನ ಕುಲಸಚಿವ ಡಾ. ಸುಂದರರಾಜ ಅರಸು ಮಾತನಾಡಿ, ಬಹಳಷ್ಟು ಜನ ಶೈಕ್ಷಣಿಕ ವರ್ಷ ಎಂದರೆ ಎಂಜಿನಿಯರ್, ವೈದಕೀಯ, ಲಾಯರ್ ಬಿಟ್ಟರೆ ಯಾವುದು ಅಲ್ಲ ಎಂದು ಭಾವಿಸಿದ್ದಾರೆ. ಕ್ರೀಡೆಯಲ್ಲಿ ಭಾಗಿಯಾಗುವುದು, ಜ್ಞಾನಾಭಿವೃದ್ಧಿ, ಸಮಾಜ ಅರ್ಥಕೊಳ್ಳುವಿಕೆ ಸಹ ಅಕಾಡಿಮೆಯಲ್ಲಿ ಬೇಕಾದ ಅಂಶಗಳಾಗಿವೆ ಎಂದು ಹೇಳಿದರು.
ಐಐಟಿಯಲ್ಲಿ ಕಲಿತವರು ಚಂದ್ರಯಾನ ಯಶಸ್ಸಿಗೆ ಕಾರಣರಾದವರು ಅಲ್ಲ. ಸರ್ಕಾರಿ ಕಾಲೇಜಿನಲ್ಲಿ ಕಲಿತವರು, ವಿದ್ಯಾರ್ಥಿ ವೇತನ ಪಡೆದವರು, ಎಂಜಿನಿಯರ್ಗಳಾಗದೆ ಇರುವವರು ವಿಜ್ಞಾನಿಗಳಾಗಿ ಚಂದ್ರನ ಮೇಲೆ ದಾಪುಗಾಲನ್ನು ಇಟ್ಟಿದ್ದಾರೆ. ಇದು ಅಕಾಡೆಮಿಗೆ ಬೇಕಾಗಿರುವುದು ಎಂದು ತಿಳಿಸಿದರು.