ನನ್ನ ಮಣ್ಣು ನನ್ನ ದೇಶ ಅಭಿಯಾನ: ಅ.30ಕ್ಕೆ ದೆಹಲಿ ತಲುಪಲಿದೆ ಅಮೃತ ಕಳಸ-ಗೋವಿಂದ ಕಾರಜೋಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹುತಾತ್ಮರ ಗೌರವಾರ್ಥ ಕರ್ತವ್ಯಪಥದಲ್ಲಿ ನಿರ್ಮಾಣವಾಗುವ ಅಮೃತ ಉದ್ಯಾನ ಸ್ಥಳಕ್ಕೆ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಅಮೃತ ಕಳಸವನ್ನು ದೆಹಲಿಗೆ ಇದೇ 30ಕ್ಕೆ ತಲುಪಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಪ್ರತಿ ಮನೆ, ಧಾರ್ಮಿಕ ಕೇಂದ್ರಗಳು, ವೀರ ಯೋಧರ ಮನೆ, ಸ್ವಾತಂತ್ರ್ಯ ಹೋರಾಟಗಾರರ ಮನೆ, ಮಹಾಪುರುಷರ ಸ್ಮಾರಕ ಸ್ಥಳ, ಸಾಧು ಸಂತರ ಮಠಗಳಿಂದ ಪುಣ್ಯ ಮಣ್ಣನ್ನು ಸಂಗ್ರಹಿಸಲಾಗಿದೆ. ಏಕ್ ಭಾರತ್, ಶ್ರೇಷ್ಠ್ ಭಾರತ್ ಕಲ್ಪನೆಯೊಂದಿಗೆ ಅಮೃತ್ ವನದಲ್ಲಿ ಮಣ್ಣನ್ನು ವಿಲೀನಗೊಳಿಸಲಾಗುವುದು ಎಂದು ತಿಳಿಸಿದರು.

ದೇಶವು ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆದರಣೀಯ ಪ್ರಧಾನಿ ನರೇಂದ್ರ ಮೋದಿಜಿ ಅವರ ಮುಂದಾಲೋಚನೆಯೊಂದಿಗೆ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ಸೆಪ್ಟೆಂಬರ್ 3 ರಿಂದ ಪ್ರಾರಂಭಿಸಲಾಗಿದೆ. ಇದೇ 31ರವರೆಗೆ ಅಭಿಯಾನ ನಡೆಯುತ್ತಿದೆ. ದೆಹಲಿ ಕರ್ತವ್ಯಪಥದ ಕಾರ್ಯಕ್ರಮಕ್ಕೆ ಇದನ್ನು ಸಮರ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ದೇಶದ 7500 ಪುಣ್ಯ ಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ಕರ್ನಾಟಕದ 6 ಸಾವಿರಕ್ಕೂ ಹೆಚ್ಚು ಪಂಚಾಯಿತಿಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ದೇಶದ 2 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಂದ ಮಣ್ಣು ಸಂಗ್ರಹ ಕಾರ್ಯ ನಡೆದಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಇದೇ 31ರಂದು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ರಾಜ್ಯದ 580 ಯುವಕರು, ನೆಹರೂ ಯುವಕ ಕೇಂದ್ರದಿಂದ 1500 ಯುವಕರು ಸೇರಿ ಒಂದೇ ರೈಲಿನಲ್ಲಿ ದೆಹಲಿಗೆ ತೆರಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಅವರು ಮಾತನಾಡಿ, 2 ತಿಂಗಳಿನಿಂದ ಪ್ರತಿ ಗ್ರಾಮದ ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಲಾಗಿದೆ. ಗ್ರಾಮಗಳಲ್ಲಿ ಅಮೃತ ವನ ನಿರ್ಮಿಸಲು ಪ್ರಧಾನಿಯವರು ಸೂಚಿಸಿದ್ದು, 1250 ಅಮೃತ ವನಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!