ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಡವಿಗೊಡೆಯ ನಾಡು ಉಡುಪಿಯಲ್ಲಿ ಪರ್ಯಾಯ ಸಂಭ್ರಮ. ದೇಶದಾದ್ಯಂತ ತೀರ್ಥಕ್ಷೇತ್ರ ಸಂದರ್ಶಿಸಿ, ಕೃಷ್ಣನಗರಿಯನ್ನು ಪ್ರವೇಶಿಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರತೀರ್ಥರನ್ನು ಸೋಮವಾರ ಸಂಜೆಯ ಉಡುಪಿಯ ಭಕ್ತಾಭಿಮಾನಿಗಳು ವೈಭವದಿಂದ ಸ್ವಾಗತಿಸಿದರು.
ನಗರದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ ಪುರಪ್ರವೇಶ ಮಾಡಲಾಯಿತು.
ಹುಲಿವೇಷ ದಾರಿಗಳು, ಕೇರಳ ವಾದ್ಯ, ಚೆಂಡಬಳಗ, ಭಜನಾ ತಂಡಗಳು, ಇಸ್ಕಾನ್ ನ ಕೃಷ್ಣ ಭಕ್ತರು, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ನಾಗಸ್ವರ ಮಂಗಳವಾದ್ಯಗಳು, ಕುಣಿತದ ಭಜನೆ, ಹರಿದಾಸರು, ಮರಕಾಲುಗಳು ರಸ್ತೆಯ ಎರಡು ಭಾಗದಲ್ಲಿದ್ದ ಜನರ ಗಮನ ಸೆಳೆಯುತ್ತಿದ್ದವು.
ಹಯಗ್ರೀವ ದೇವರು, ಕೃಷ್ಣಸಾರಥಿ, ಪಂಡಾಪುರದ ಪಾಂಡುರಂಗ ದೇವರು, ಚಿನ್ನದ ಪಲ್ಲಕ್ಕಿ, ಗರುಡವಾಹನ ವಿಷ್ಣು ಮತ್ತಿತರ ಸ್ಥಬ್ದಚಿತ್ರಗಳು ಮೆರವಣಿಗೆಗೆ ಮಿನಿ ಪರ್ಯಾಯೋತ್ಸವದ ರೂಪ ನೀಡಿತು.