ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ನಿರ್ದೇಶಕ ಅನಂತ್ ಅಂಬಾನಿ ತಮ್ಮ 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾಮ್ನಗರದಿಂದ ದ್ವಾರಕದ ದ್ವಾರಕಾಧೀಶ ದೇವಸ್ಥಾನದವರೆಗೆ 170 ಕಿಲೋಮೀಟರ್ ದೂರದ ಪಾದಯಾತ್ರೆಯನ್ನು ಯಶಸ್ವಿಯಾಗಿ ಇಂದು (ಏಪ್ರಿಲ್ 6) ಮುಗಿಸಿದ್ದಾರೆ.
ಕಳೆದ ಮಾರ್ಚ್ 29ರಂದು ತೀರ್ಥಯಾತ್ರೆ ಹೊರಟಿದ್ದರು. ಈ ಪಾದಯಾತ್ರೆಯಲ್ಲಿ ಅವರ ತಾಯಿ ನೀತಾ ಅಂಬಾನಿ ಮತ್ತು ಪತ್ನಿ ರಾಧಿಕಾ ಮರ್ಚೆಂಟ್ ಕೂಡ ಕೊನೆಯ ದಿನದಂದು ಸೇರಿಕೊಂಡಿದ್ದರು.
ಈ ಯಾತ್ರೆಯನ್ನು ತಮ್ಮ ಆಧ್ಯಾತ್ಮಿಕ ಪ್ರಯಾಣ ಎಂದು ಕರೆದಿದ ಅನಂತ್, ‘ನಾನು ಈ ಯಾತ್ರೆಯನ್ನು ದೇವರ ಹೆಸರಿನಲ್ಲಿ ಶುರುಮಾಡಿದೆ ಮತ್ತು ದೇವರ ಹೆಸರಿನಲ್ಲಿಯೇ ಮುಗಿಸಿದೆ. ದ್ವಾರಕಾಧೀಶನಿಗೆ ಧನ್ಯವಾದಗಳು. ನನ್ನ ಜೊತೆಗೆ ಈ ಯಾತ್ರೆಯಲ್ಲಿ ಭಾಗಿಯಾದವರಿಗೆ ಕೃತಜ್ಞನಾಗಿದ್ದೇನೆ,’ ಎಂದು ಹೇಳಿದ್ದಾರೆ.
ಅಲ್ಲದೇ ಪಾದಯಾತ್ರೆ ವೇಳೆ ದಾರಿ ಮಧ್ಯೆ ಅವರು ಒಂದು ಟ್ರಕ್ನಲ್ಲಿ ಸಾಗಿಸಲಾಗುತ್ತಿದ್ದ ಕೋಳಿಗಳನ್ನು ರಕ್ಷಿಸಿ, ಅವುಗಳ ಆರೈಕೆಗೆ ವ್ಯವಸ್ಥೆ ಮಾಡಿದ ಘಟನೆಯೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು .