ಹೊಸದಿಗಂತ ವರದಿ ಮಡಿಕೇರಿ:
ನಿಂತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಗೋಣಿಕೊಪ್ಪದಲ್ಲಿ ನಡೆದಿದೆ.
ಬೆಕ್ಕೆಸೊಡ್ಲೂರುವಿನ ಸುಳ್ಳಿಮಾಡ ಭೋಜಮ್ಮ (62) ಎಂಬವರೇ ಸಾವಿಗೀಡಾದವರು.
ಇಗ್ಗುತಪ್ಪ ದೇವಾಲಯದಲ್ಲಿ ನಡೆದ ಅಪ್ಪಂಡೇರಂಡ ಬಿ.ದೇವಯ್ಯ ಅವರ ಪುತ್ರಿಯ ನಾಮಕರಣಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸೋಮವಾರ ಬೆಳಗಿನ ಜಾವ 1ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಬೆಕ್ಕೆಸೊಡ್ಲೂರು ಗ್ರಾಮದ ದಿ.ಸುಳ್ಳಿಮಾಡ ಉತ್ತಯ್ಯ ಅವರ ಪತ್ನಿಯಾಗಿರುವ ಭೋಜಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರೆನ್ನಲಾಗಿದ್ದು, ಗೋಣಿಕೊಪ್ಪ ಅಂಚೆಕಚೇರಿ ಸಮೀಪ ಆಗಮಿಸಿದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.
ಈ ಸಂದರ್ಭ ಕಾರು ಚಾಲಿಸುತ್ತಿದ್ದ ಪುತ್ರ ಭಜನ್ ಅವರು ಗಾಬರಿಯಾಗಿ ವಿಕ್ರಂ ಡೆಕೋರೇಟರ್ಸ್ ಮುಂಭಾಗ ಕಾರು ನಿಲ್ಲಿಸಿದಾಗ ಮತ್ತೊಂದು ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಭೋಜಮ್ಮ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.