ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ಸಂಬಂಧದ ಕುರಿತು ಇತ್ತೀಚಿನ ದಿನಗಳಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಸುನೀತಾ ಅಹುಜಾ ಅವರು ಪುತ್ರ ಯಶವರ್ಧನ್ ಅಹುಜಾ ಮತ್ತು ವಕೀಲರೊಂದಿಗೆ ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ಗೆ ಭೇಟಿ ನೀಡಿರುವುದು ಗಮನ ಸೆಳೆದಿದೆ. ಆದರೆ ಅವರು ನ್ಯಾಯಾಲಯಕ್ಕೆ ತೆರಳಲು ಕಾರಣವೇನು ಎಂಬ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.
ಮಾಧ್ಯಮದ ಪ್ರಶ್ನೆಗೆ ಸುನೀತಾ ಉತ್ತರ
ಆಗಸ್ಟ್ 19ರಂದು ಕೋರ್ಟ್ ಆವರಣದಿಂದ ಹೊರಬಂದ ಸುನೀತಾ ಅವರನ್ನು ಮಾಧ್ಯಮ ಪ್ರತಿನಿಧಿಗಳು ಭೇಟಿಯ ಉದ್ದೇಶದ ಬಗ್ಗೆ ಪ್ರಶ್ನಿಸಿದರು. ಈ ವೇಳೆ ಅವರು ನೇರವಾಗಿ ಕಾರಣ ತಿಳಿಸದೆ, ಹಾಸ್ಯಮಯವಾಗಿ “ಬರ್ತ್ಡೇ ಆಚರಿಸಲು ಬಂದಿದ್ದೇವೆ” ಎಂದು ಪ್ರತಿಕ್ರಿಯಿಸಿ ಕಾರಿನಲ್ಲಿ ತೆರಳಿದರು.
ಇದನ್ನೂ ಓದಿ:
ವಕೀಲರೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿರುವ ಹಿನ್ನೆಲೆಯಲ್ಲಿ ಭೇಟಿಯ ಉದ್ದೇಶದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ದಾಖಲೆ ಅಥವಾ ಹೇಳಿಕೆ ಸದ್ಯಕ್ಕೆ ಬಹಿರಂಗವಾಗಿಲ್ಲ.
ಕೋಮಲ್ ರಾಣಿ ವಿಚಾರದಿಂದ ವಿವಾದ
ಇತ್ತೀಚೆಗೆ ಗೋವಿಂದ ಅವರು ನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಕಾಣಿಸಿಕೊಂಡಿದ್ದ ವಿಚಾರ ಸಾಮಾಜಿಕ ಹಾಗೂ ಮಾಧ್ಯಮ ವಲಯದಲ್ಲಿ ಚರ್ಚೆಗೆ ಬಂದಿತ್ತು. ಈ ಬೆಳವಣಿಗೆ ಕುರಿತು ಸುನೀತಾ ಅಹುಜಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಸಿನಿಮಾ ಪ್ರಚಾರದ ನೆಪದಲ್ಲಿ ಗೋವಿಂದ ಮತ್ತು ಕೋಮಲ್ ರಾಣಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆಯೂ ಸುನೀತಾ ಪ್ರಶ್ನೆ ಎತ್ತಿದ್ದರು. ಅವರ ಕೆಲವು ಹೇಳಿಕೆಗಳು ದಂಪತಿಯ ನಡುವಿನ ಭಿನ್ನಾಭಿಪ್ರಾಯದ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸಿದ್ದವು.
ಸುನೀತಾ ಹೇಳಿಕೆಗೆ ಗೋವಿಂದ ತಿರುಗೇಟು
ಪತ್ನಿಯ ಸಾರ್ವಜನಿಕ ಹೇಳಿಕೆಗಳಿಗೆ ಗೋವಿಂದ ಕೂಡ ಪ್ರತಿಕ್ರಿಯಿಸಿದ್ದರು. ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಅವರು ಸುನೀತಾಗೆ ಸೂಚಿಸಿದ್ದರು. ಮಾಧ್ಯಮ ಹಾಗೂ ಪಾಡ್ಕಾಸ್ಟ್ಗಳ ಮೂಲಕ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು.



