ಡಿಎಂಕೆ ನಾಯಕ ಸೆಂಥಿಲ್‌ ಬಾಲಾಜಿಗೆ ಮತ್ತೊಂದು ಶಾಕ್‌: ಸಚಿವ ಸ್ಥಾನದಿಂದ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಬಂಧನವಾಗಿರುವ ತಮಿಳುನಾಡು ಸಚಿವ ಸೆಂಥಿಲ್‌ ಬಾಲಿಜಿ ಅವರನ್ನು ಸಚಿವ ಸ್ಥಾನದಿಂದಲೇ ವಜಾಗೊಳಿಸಲಾಗಿದೆ.

ಇದೀಗ ಅವರ ಖಾತೆಗಳನ್ನು ಇಬ್ಬರು ಸಚಿವರಿಗೆ ಹಸ್ತಾಂತರಿಸಲಾಗಿದೆ. ವಿದ್ಯುತ್ ಇಲಾಖೆಯನ್ನು ಹಣಕಾಸು ಸಚಿವ ತಂಗಂ ತೆನ್ನರಸು ಅವರಿಗೆ ಹಸ್ತಾಂತರಿಸಲಾಗಿದ್ರೆ, ಅಬಕಾರಿ ಇಲಾಖೆಯನ್ನು ವಸತಿ ಸಚಿವ ಮುತ್ತುಸ್ವಾಮಿಗೆ ಹಸ್ತಾಂತರಿಸಲಾಗಿದೆ .

ಈ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ಅಲ್ಲಿನ ರಾಜ್ಯಪಾಲ ಆರ್.ಎನ್ ರವಿ ಅವರಿಗೆ ಮಾಹಿತಿ ನೀಡಿದ್ದು, ಸೆಂಥಿಲ್ ಬಾಲಾಜಿ ಅವರ ಖಾತೆಗಳನ್ನು ಬೇರೆ ಸಚಿವರಿಗೆ ನೀಡುವಂತೆ ಶಿಫಾರಸು ಮಾಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬುಧವಾರ ಮುಂಜಾನೆ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದೆ.

2011-15ರಲ್ಲಿ ದಿವಂಗತ ಜೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರದಲ್ಲಿ ಸೆಂಥಿಲ್‌ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಸಾರಿಗೆ ನಿಗಮಗಳಲ್ಲಿ ಚಾಲಕರು ಮತ್ತು ಕಂಡಕ್ಟರ್‌ಗಳಾಗಿ ನೇಮಕ ಮಾಡುವುದಾಗಿ ವಿವಿಧ ವ್ಯಕ್ತಿಗಳಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಶಾರುಖ್‌ ಜಾಹೀರಾತು ನೀಡುವ ಬೈಜುಸ್‌ ಮೇಲೆ ಇಡಿ ರೇಡ್‌: 28,000 ಕೋಟಿ ಮೌಲ್ಯದ ವಿದೇಶಿ ಹೂಡಿಕೆ ಮೇಲೆ ಹದ್ದಿನ ಕಣ್ಣು

ಬಾಲಾಜಿ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು ಮತ್ತು ನಂತರ ಅವರ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿತ್ತು. ಹಾಗೂ, ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು. ಉದ್ಯೋಗಕ್ಕಾಗಿ ನಗದು ಹಗರಣದ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೇ ತಿಂಗಳಲ್ಲಿ ಪೊಲೀಸರು ಮತ್ತು ಇಡಿಗೆ ಅನುಮತಿ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!