ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪ್ಪೂರು ಜಿಲ್ಲೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ವಿಜಯ್ ಅವರ ಚುನಾವಣಾ ಪ್ರಚಾರ ರ್ಯಾಲಿ ಮಂಗಳವಾರ ಅಪ್ರತೀಕ್ಷಿತವಾಗಿ ರದ್ದುಗೊಂಡಿದೆ. ತೀವ್ರ ಬಿಸಿಲು, ಉಷ್ಣಾಂಶ ಮತ್ತು ಭಾರೀ ಜನಸಂದಣಿ ನಡುವೆಯಲ್ಲಿ ಕನಿಷ್ಠ 15 ಮಂದಿ ಬೆಂಬಲಿಗರು ಅಸ್ವಸ್ಥರಾಗಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಜಯ್ ರಾಜ್ಯದ್ಯಂತ ಪ್ರಚಾರ ಪ್ರವಾಸ ನಡೆಸುತ್ತಿದ್ದಾರೆ. ತಿರುಪ್ಪೂರಿನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಭಾರೀ ಶಕ್ತಿ ಪ್ರದರ್ಶನವೆಂದು ಪಕ್ಷ ಹೇಳಿತ್ತು. ಬೆಳಿಗ್ಗೆ ಸಾವಿರಾರು ಮಂದಿ ಸ್ಥಳಕ್ಕೆ ಆಗಮಿಸಿ ನಾಯಕನನ್ನು ನೋಡುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ತಾಪಮಾನ ಮತ್ತಷ್ಟು ಏರಿಕೆಯಾಗುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಯಿತು.
ಇದನ್ನೂ ಓದಿ:
ಸಂಜೆ 4 ಗಂಟೆಗೆ ವಿಜಯ್ ಮಾತನಾಡುವ ನಿರೀಕ್ಷೆಯಿದ್ದರೂ, ಅವರು ಸುಮಾರು 4:45ಕ್ಕೆ ಸ್ಥಳಕ್ಕೆ ಬಂದರು. ಅದಕ್ಕೂ ಮೊದಲು ಉಷ್ಣಾಂಶ ಹೆಚ್ಚಾಗಿ 13 ಮಹಿಳೆಯರು ಹಾಗೂ ಇಬ್ಬರು ಪುರುಷರು ಮೂರ್ಛೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಅಸ್ವಸ್ಥರಾದವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಸ್ಥಳದಲ್ಲಿದ್ದ ಸ್ವಯಂಸೇವಕರು ಮತ್ತು ಪೊಲೀಸ್ ಸಿಬ್ಬಂದಿ ಕೂಡ ನೆರವು ನೀಡಿದರು. ಚಿಕಿತ್ಸೆ ಬಳಿಕ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜನಸಂದಣಿ ಹೆಚ್ಚುತ್ತಿರುವುದು ಮತ್ತು ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ, ಪೊಲೀಸರು ನೀಡಿದ ಸಲಹೆಯ ಮೇರೆಗೆ ವಿಜಯ್ ಅವರ ಆರು ಕಿಲೋಮೀಟರ್ ರೋಡ್ ಶೋ ಹಾಗೂ ಭಾಷಣವನ್ನು ಪಕ್ಷ ನಾಯಕತ್ವ ರದ್ದುಗೊಳಿಸಿದೆ. ಹಿಂದೆ ನಡೆದ ದುರ್ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.



