ಹೊಸದಿಗಂತ ಡಿಜಿಟಲ್ ಡೆಸ್ಕ್:
2023-24ನೇ ಸಾಲಿಗೆ ಸಿದ್ಧಪಡಿಸಲಾದ ಬಜೆಟ್ಗೆ ಆಂಧ್ರಪ್ರದೇಶದ ಮಂತ್ರಿ ಮಂಡಳಿ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ವೈಎಸ್ ಜಗನ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದ್ದು, ಈ ಸಭೆಯಲ್ಲಿ ಇಂದು ಮಂಡಿಸಲಿರುವ ಬಜೆಟ್ಗೆ ಸಚಿವ ಸಂಪುಟ ಅನುಮೋದನೆ ಸಿಕ್ಕಿದೆ. ಇಂದು ಬೆಳಗ್ಗೆ ಸಭೆ ನಡೆಸಿದ ಸಚಿವ ಸಂಪುಟ ಸುಮಾರು 2.79 ಲಕ್ಷ ಕೋಟಿ ಬಜೆಟ್ ಗೆ ಓಕೆ ಹೇಳಿದೆ. ಸಂಪುಟದಲ್ಲಿ ಬಜೆಟ್ ಮಂಡನೆಗೆ ಒಪ್ಪಿಗೆ ನೀಡಿದ ನಂತರ ಹಣಕಾಸು ಸಚಿವ ಬುಗ್ಗನ ರಾಜೇಂದ್ರನಾಥ ರೆಡ್ಡಿ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಬುಗ್ಗನ ರಾಜೇಂದ್ರನಾಥ ರೆಡ್ಡಿ, ಬಜೆಟ್ ಎಲ್ಲ ಸಮುದಾಯಗಳ ಬೆಂಬಲ ಮತ್ತು ಅಭಿವೃದ್ಧಿಗಾಗಿ ಇರುತ್ತದೆ. ಬಡವರು ಹಾಗೂ ದುರ್ಬಲ ವರ್ಗದವರಿಗೆ ಆದ್ಯತೆ ನೀಡಲಾಗುವುದು ಎಂದರು. ಶಿಕ್ಷಣ, ವೈದ್ಯಕೀಯ, ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ದೊರೆಯಲಿದೆ. ಆಡಳಿತದಲ್ಲಿ ಆಗಿರುವ ಹೊಸ ಬದಲಾವಣೆಗೆ ಅನುಗುಣವಾಗಿ ಹಂಚಿಕೆಯೂ ಆಗಲಿದೆ ಎಂಬ ಮಾತನ್ನು ಹೇಳಿದರು.
ಕೃಷಿ ಬಜೆಟ್ ಅನ್ನು ಕೃಷಿ ಸಚಿವ ಕಾಕಣಿ ಗೋವರ್ಥನ್ ರೆಡ್ಡಿ ಮಂಡಿಸಲಿದ್ದಾರೆ. ಸಿದಿರಿ ಅಪ್ಪಲರಾಜು ಅವರು ವಿಧಾನ ಪರಿಷತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಕಲ್ಯಾಣಕ್ಕೆ ಹೆಚ್ಚಿನ ಹಣ ಮೀಸಲಿಡಲು ಅವಕಾಶವಿದೆ ಎಂದು ಗೊತ್ತಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ಕಲ್ಯಾಣ, ಅಭಿವೃದ್ಧಿಗೆ ಅವಕಾಶವಿದೆ.