ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂಜೆಯ ಹೆಸರಲ್ಲಿ ನಾಲ್ಕು ವರ್ಷದ ಹೆಣ್ಣುಮಗುವಿನ ಬಾಯಿಗೆ ಕುಂಕುಮ ತುರುಕಿ ಸಾಯಿಸಿದ ದಾರುಣ ಘಟನೆ ಎಪಿಯ ನೆಲ್ಲೂರು ಜಿಲ್ಲೆಯ ಆತ್ಮಕೂರು ಪ್ರದೇಶದ ಪೆರಾರೆಡ್ಡಿಪಲ್ಲೆ ಎಂಬಲ್ಲಿ ದುಷ್ಕೃತ್ಯ ನಡೆದಿದೆ. ಹೆತ್ತ ಅಪ್ಪನಿಂದಲೇ ಇಂಥಹ ಹೇಯ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಂಟಲಿನಲ್ಲಿ ಕುಂಕುಮ ಸಿಲುಕಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ವರ್ಷದ ಬಾಲಕಿ ಪುನರ್ವಿಕಾ ಮೃತಪಟ್ಟಿದ್ದಾಳೆ.
ತಾನು ಈ ಪೂಜೆ ಮಾಡಿದರೆ ದೇವರಾಗುತ್ತೇನೆ ಎಂಬ ಮೂಢನಂಬಿಕೆಯಿಂದ ಏನೂ ಅರಿಯದ ಮುಗ್ದ ಬಾಲಕಿ ಉಸಿರನ್ನೇ ಕಸಿದಿದ್ದಾನೆ ಹೆತ್ತಪ್ಪ. ಬಾಲಕಿ ತಂದೆ ವೇಣು ಮಗಳ ಬಾಯಿಗೆ ಕುಂಕುಮ ಸುರಿದು ಹುಚ್ಚುಚ್ಚಾಗಿ ಮಂತ್ರ ಹೇಳುತ್ತಾ ಪೂಜೆ ಶುರು ಮಾಡಿದ್ದಾನೆ. ಕುಂಕುಮ ಗಂಟಲಲ್ಲಿ ಸಿಲುಕಿ ಉಸಿರಾಡಲು ಕಷ್ಟವಾಗಿ ಮಗು ಚೀರಾಡಿದ್ದಾಳೆ. ಕೂಗು ಕೇಳಿದ ಸ್ಥಳೀಯರು ಕೂಡಲೇ ಮನೆಯೊಳಗೆ ಹೋಗಿ ವೇಣು ಘನಕಾರ್ಯ ನೋಡಿ ಹಿಗ್ಗಾಮುಗ್ಗ ಥಳಿಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿನ್ನೆಯಿಂದ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ವರ್ಷದ ಮಗು ಗುರುವಾರ (16,2022) ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೇಣುನನ್ನ ಬಂಧಿಸಿದ್ದಾರೆ.