ಇಂದಿನಿಂದ ಎರಡು ದಿನಗಳ ಕಾಲ ಎಪಿಯ ‘ಜಾಗತಿಕ ಹೂಡಿಕೆದಾರರ ಸಮಾವೇಶ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಆಂಧ್ರಪ್ರದೇಶ ಸರ್ಕಾರ ಆಯೋಜಿಸಿರುವ ‘ಜಾಗತಿಕ ಹೂಡಿಕೆದಾರರ ಶೃಂಗಸಭೆ-2023’ ವಿಶಾಖಪಟ್ಟಣದಲ್ಲಿ ಪ್ರಾರಂಭವಾಗಿದೆ. ಬೆಳಗ್ಗೆ 10.45ಕ್ಕೆ ಸ್ಥಳೀಯ ಆಂಧ್ರ ವಿಶ್ವವಿದ್ಯಾಲಯ ಮೈದಾನದ ಆವರಣದಲ್ಲಿ ಸಿಎಂ ಜಗನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳನ್ನು ಕಲಾವಿದರು ಸಾಂಪ್ರದಾಯಿಕ ನೃತ್ಯಗಳೊಂದಿಗೆ ಸ್ವಾಗತಿಸುತ್ತಿದ್ದಾರೆ.

ಇಂದು ಮತ್ತು ನಾಳೆ ನಡೆಯಲಿರುವ ಈ ಶೃಂಗಸಭೆಯನ್ನು ಎಪಿ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಶೃಂಗಸಭೆಯ ಮೂಲಕ ಕನಿಷ್ಠ ಎರಡು ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಸಾಧಿಸುವ ಗುರಿಯನ್ನು ಜಗನ್ ಸರ್ಕಾರ ಹೊಂದಿದೆ. ಈ ಶೃಂಗಸಭೆಗೆ 25 ದೇಶಗಳ ಹೈಕಮಿಷನರ್‌ಗಳು ಬರುತ್ತಿದ್ದಾರೆ. ಇವರೊಂದಿಗೆ 15 ಸಾವಿರ ಪ್ರತಿನಿಧಿಗಳು, ಭಾರತದ 35 ಉನ್ನತ ಕೈಗಾರಿಕಾ ವ್ಯಾಪಾರ ಉದ್ಯಮಿಗಳು, ಏಳು ಮಂದಿ ಕೇಂದ್ರ ಸಚಿವರು ಹಾಗೂ ವಿವಿಐಪಿಗಳೂ ಆಗಮಿಸುತ್ತಿದ್ದಾರೆ.

ಭದ್ರತೆ ದೃಷ್ಟಿಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ ಸುಮಾರು 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಅತಿಥಿಗಳಿಗಾಗಿ ಸರ್ಕಾರ ಹೆಲಿಕಾಪ್ಟರ್‌ಗಳು ಮತ್ತು ಐಷಾರಾಮಿ ಕಾರುಗಳನ್ನು ಸಿದ್ಧಪಡಿಸಿದೆ. ಜನಪ್ರಿಯ ಹೋಟೆಲ್‌ಗಳಲ್ಲಿ 1500 ಕ್ಕೂ ಹೆಚ್ಚು ಶೂಟ್‌ಗಳನ್ನು ಸರ್ಕಾರ ಬುಕ್ ಮಾಡಿದೆ.

ಕೇಂದ್ರ ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆಗೆ 21 ಕಾರ್ಪೊರೇಟ್ ವ್ಯಕ್ತಿಗಳು ಮೊದಲ ದಿನ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ 150ಕ್ಕೂ ಹೆಚ್ಚು ಮಳಿಗೆಗಳಿರುವ ಕೈಗಾರಿಕಾ ವಸ್ತುಪ್ರದರ್ಶನವನ್ನು ಕೇಂದ್ರ ಸಚಿವ ಗಡ್ಕರಿ ಅವರೊಟ್ಟಿಗೆ ಸಿಎಂ ಉದ್ಘಾಟಿಸಲಿದ್ದಾರೆ.

ಸರ್ಕಾರಕ್ಕೆ ಆದಾಯ, ಯುವಕರಿಗೆ ಉದ್ಯೋಗ, ಜನರಿಗೆ ನೆಮ್ಮದಿ ತರುವ ಏಕೈಕ ಕ್ಷೇತ್ರ ಪ್ರವಾಸೋದ್ಯಮ. ವೈಜಾಗ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಪ್ರವಾಸೋದ್ಯಮಕ್ಕಾಗಿ 21 ಸಾವಿರ ಕೋಟಿಗೂ ಹೆಚ್ಚು ಎಂಒಯುಗಳಿಗೆ ಸಹಿ ಹಾಕಲಾಗುವುದು ಎಂದು ಮಂತ್ರಿ ರೋಜಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!