ಹೊಸದಿಗಂತ ವರದಿ ರಾಯಚೂರು:
ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಅಂಗವಾಗಿ ತಮಿಳುನಾಡಿನ ಶ್ರೀ ಕ್ಷೇತ್ರ ಶ್ರೀರಂಗನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿ ಶೇಷ ವಸ್ತ್ರವನ್ನು ರಾಯರಿಗೆ ಸಮರ್ಪಿಸಿದರು.
ಶ್ರೀಮಠದ ಆವರಣದಲ್ಲಿ ಸಕಲ ವಾದ್ಯಗಳ ಮೆರವಣಿಗೆ ಮೂಲಕ ಅವರನ್ನು ಸ್ವಾಗತಿಸಲಾಯಿತು. ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಅವರನ್ನು ಸ್ವಾಗತಿಸಿದರು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ರಾಯರಿಗೆ ಸಮರ್ಪಿಸಿದರು.
ನಂತರ ಶ್ರೀಗಳು ಮಾತನಾಡಿ, ಶ್ರೀರಂಗ-ಅಹೋಬಲ ಕ್ಷೇತ್ರದಿಂದ ವಿಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆಯಾಗಿದ್ದು, ಎಲ್ಲ ಪುಣ್ಯಕ್ಷೇತ್ರ ಫಲ ಮಂತ್ರಾಲಯಕ್ಕೆ ಬಂದಿದೆ. ಐತಿಹಾಸಿಕ ದೈವಿಕ ಕ್ಷೆತ್ರಗಳಿಂದ ಬಂದಿರುವ ಶೇಷವಸ್ತ್ರದ ಮೂಲಕ ರಾಯರಿಗೆ ಅನುಗ್ರಹಿಸಿದ್ದಾರೆ. ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗ ಕ್ಷೇತ್ರದಲ್ಲಿರುವ ಶ್ರೀಮಠವು ಅನನ್ಯ ಸಂಬಂಧ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತ ಅಧಿಕಾರಿ ಸಂಪತ್, ಅರ್ಚಕ ರಮೇಶ್ ಆರ್ಚಾಯ, ಶ್ರೀ ರಂಗ ಕ್ಷೇತ್ರದ ಗೋಪಾಲನ್, ವಿದ್ವಾನ ಸುಧೀಂದ್ರ ಅಚಾರ್ಯ, ಧರಶ್ರೀ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ಗುರುಸಾರಭೌಮ ವಿದ್ಯಾಪೀಠದ ಪ್ರಚಾರ್ಯ ರಮಣರಾವ, ಶ್ರೀಮಠದ ಮಾಧ್ಯಮ ಉಸ್ತುವಾರಿ ಶ್ರೀನಿಧಿ ಸೇರಿದಂತೆ ಗುರುಸಾರಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.