ಮಳೆಗಾಲವು ತಂಪಾದ ವಾತಾವರಣ ತಂದರೂ, ಜೊತೆಗೆ ಹಲವು ರೋಗರುಜಿನಗಳನ್ನು ಆಹ್ವಾನಿಸುತ್ತದೆ. ಈ ಅವಧಿಯಲ್ಲಿ ನಮ್ಮ ಜೀರ್ಣಕ್ರಿಯೆ ಶಕ್ತಿ ಮಂದವಾಗುವುದರಿಂದ, ಆಹಾರ ಸೇವನೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಮುಖ್ಯವಾಗಿ ಕೆಲವು ತರಕಾರಿಗಳು ಈ ಹವಾಮಾನದಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು.
ಎಲೆಕೋಸು ಮತ್ತು ಹೂಕೋಸು
ಎಲೆಕೋಸು ಹಾಗೂ ಹೂಕೋಸುಗಳ ಪದರಗಳಲ್ಲಿ ಕ್ರಿಮಿಕೀಟಗಳು ಮತ್ತು ಸೂಕ್ಷ್ಮಜೀವಿಗಳು ಸುಲಭವಾಗಿ ಅಡಗಿರುತ್ತವೆ. ಮಳೆಗಾಲದ ತೇವಾಂಶವು ಇವುಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವಾಗಿದ್ದು, ಇವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಸೋಂಕು ಉಂಟಾಗಬಹುದು.
ಪಾಲಕ್ ಸೇರಿದಂತೆ ಸೊಪ್ಪುಗಳು
ಸೊಪ್ಪುಗಳು ಸಾಮಾನ್ಯವಾಗಿ ಮಣ್ಣು ಮತ್ತು ನಿಂತ ನೀರಿನಲ್ಲಿ ಬೆಳೆಯುವುದರಿಂದ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳ ಆವಾಸಸ್ಥಾನವಾಗುತ್ತವೆ. ಸರಿಯಾಗಿ ತೊಳೆಯದಿದ್ದರೆ ಇವುಗಳಿಂದ ವಾಂತಿ ಮತ್ತು ಅತಿಸಾರ ಸಂಭವಿಸಬಹುದು.
ಬದನೆಕಾಯಿ
ಬದನೆಕಾಯಿಯಲ್ಲಿ ‘ಆಲ್ಕಲಾಯ್ಡ್’ ಎಂಬ ನೈಸರ್ಗಿಕ ರಾಸಾಯನಿಕವಿರುತ್ತದೆ. ಮಳೆಗಾಲದಲ್ಲಿ ಕೀಟಗಳ ಕಾಟ ಹೆಚ್ಚಿರುವುದರಿಂದ ಬದನೆಕಾಯಿ ತಿನ್ನುವುದರಿಂದ ಅಲರ್ಜಿ, ತುರಿಕೆ ಹಾಗೂ ಹೊಟ್ಟೆಯುರಿ ಕಾಣಿಸಿಕೊಳ್ಳಬಹುದು.
ಅಣಬೆ (ಮಶ್ರೂಮ್)
ಅಣಬೆಗಳು ತೇವಾಂಶವಿರುವ ಜಾಗದಲ್ಲಿ ಬೆಳೆಯುವುದರಿಂದ ಶೀಘ್ರವಾಗಿ ಬ್ಯಾಕ್ಟೀರಿಯಾಗಳಿಗೆ ತುತ್ತಾಗುತ್ತವೆ. ಹಳೆಯ ಅಥವಾ ಕಲುಷಿತ ಅಣಬೆ ತಿಂದರೆ ವಿಷಪೂರಿತವಾಗುವ ಸಾಧ್ಯತೆ ಹೆಚ್ಚು.



