ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದ ಆವರಣದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ ‘ಆರೋಗ್ಯ ವನ’ವನ್ನು ಉದ್ಘಾಟಿಸಿದರು.
ಒಟ್ಟು 6.6 ಎಕರೆ ಪ್ರದೇಶದಲ್ಲಿ ಆರೋಗ್ಯ ವನವನ್ನು ಯೋಗ ಮುದ್ರೆಯಲ್ಲಿ ಕುಳಿತಿರುವ ಮನುಷ್ಯನ ಆಕಾರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಆಯುರ್ವೇದದಲ್ಲಿ ಚಿಕಿತ್ಸೆಗಳಿಗಾಗಿ ಬಳಸಲಾಗುವ ಸುಮಾರು 215 ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳನ್ನು ಒಳಗೊಂಡಿದೆ. ಈ ವನದ ಇತರ ಕೆಲವು ವೈಶಿಷ್ಟ್ಯಗಳೆಂದರೆ ನೀರಿನ ಕಾರಂಜಿಗಳು, ಯೋಗ ವೇದಿಕೆ, ಜಲಗಾಲುವೆ, ಕಮಲದ ಕೊಳ ಮತ್ತು ವ್ಯೂ ಪಾಯಿಂಟ್.
ಆಯುರ್ವೇದ ಸಸ್ಯಗಳ ಪ್ರಾಮುಖ್ಯತೆ ಮತ್ತು ಮಾನವ ದೇಹದ ಮೇಲೆ ಅವುಗಳ ಪರಿಣಾಮಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಆರೋಗ್ಯ ವನ ಪರಿಕಲ್ಪನೆಯನ್ನು ಕಲ್ಪಿಸಲಾಗಿದೆ. ಈ ವನವು ಈಗ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.