ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿದ್ದ 24 ಪಾಕ್ ಮತ್ತು 159 ಬಾಂಗ್ಲಾದೇಶ ಮೂಲದವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಿ. ಎಸ್. ಅರುಣ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಕ್ಕೆ ಪದೇ ಪದೇ ಅನಧಿಕೃತವಾಗಿ ಪ್ರವೇಶಿಸುವ ಇಂತಹ ಪ್ರಕರಣಗಳ ಬಗ್ಗೆ ನಿಗಾವಹಿಸಲು ಬೆಂಗಳೂರು ನಗರದಲ್ಲಿ ನಗರ ವಿಶೇಷ ಘಟಕವಿದ್ದು, ನಗರಕ್ಕೆ ಪ್ರವೇಶಿಸುವ ಯಾವುದೇ ವಿದೇಶಿಯರ ಬಗ್ಗೆ ಪೊಲೀಸ್ ಠಾಣೆಗಳ ಮೂಲಕ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್. ಆರ್. ಆರ್. ಓ ) ಬೆಂಗಳೂರು ರವರಿಂದ ಮಾಹಿತಿಯನ್ನು ಪಡೆದು, ಪ್ರತಿ ವಿಭಾಗೀಯ ಡಿಸಿಪಿಗಳ ಮುಖಾಂತರ ವಿಶೇಷ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಸಿ.ಸಿ.ಬಿಯ ಸಂಘಟಿತ ಅಪರಾಧ ದಳ ಕೂಡ ಕಾರ್ಯಾಚರಣೆ ನಡೆಸುತ್ತಿದೆ. ಇತರೆ ನಗರ /ಜಿಲ್ಲೆಗಳಲ್ಲಿ ಅನಧಿಕೃತವಾಗಿ ಪ್ರವೇಶಿಸುವ ವಿದೇಶಿಯರುಗಳ ಪತ್ತೆಯ ಬಗ್ಗೆ Special Task force ರಚಿಸಿದ್ದು, ಅದು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.