ಹೊಸದಿಗಂತ ವರದಿ,ಮಡಿಕೇರಿ:
ಹಲವು ವರ್ಷಗಳಿಂದ ಗಾಂಜಾ ವ್ಯವಹಾರ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ವೀರಾಜಪೇಟೆ ಪೊಲೀಸರು, ಆರು ಕೆ.ಜಿ.ಯಷ್ಟು ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಒರಿಸ್ಸಾ ಮೂಲದ ಸೂರ್ಯ ಮೊಹಂತಿ ಎಂದು ಗುರುತಿಸಲಾಗಿದೆ.
ಆರೋಪಿಯು ವೀರಾಜಪೇಟೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಕ್ಯಾಂಟೀನ್, ವೀರಾಜಪೇಟೆಯ ಮೂರ್ನಾಡು ಜಂಕ್ಷನ್ ಬಳಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದು, ಇತ್ತೀಚೆಗೆ ಹಳ್ಳಿಗಟ್ಟುವಿನ ಕಾಲೇಜು ಒಂದರಲ್ಲಿ ಕ್ಯಾಂಟೀನ್ ಪ್ರಾರಂಭಿಸಿದ್ದನೆನ್ನಲಾಗಿದೆ.
ಪೋಷಕರ ದೂರಿನ ಮೇರೆಗೆ ಆರೋಪಿಯ ಮಾಹಿತಿ ಕಲೆ ಹಾಕಿದ ಪೊಲೀಸರು, ಮಂಗಳವಾರ ಆತನನ್ನು ಹಿಂಬಾಲಿಸಿದ್ದಾರೆ. ಕೇರಳದಿಂದ ಬರುತ್ತಿದ್ದ ಯುವಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಪೊಲೀಸರು ಬೆನ್ನುಬಿದ್ದ ವಿಷಯ ತಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಬೆಂಬಿಡದ ಪೊಲೀಸರು ಅರ್ಜಿ ಗ್ರಾಮದ ಮಾಂಸದ ಅಂಗಡಿ ಬಳಿ ಆತನನ್ನು ಬಂಧಿಸಿ, ಆತನ ಫಾಸ್ಟ್ ಫುಡ್ ಅಂಗಡಿ ಮತ್ತು ಇತರೆ ಕಡೆಗಳಲ್ಲಿ 6,360 ಗ್ರಾಂ ನಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆತನ ಬಳಿ ಗಾಂಜಾ ಖರೀದಿಸಲು ಬಂದಿದ್ದ ಕೇರಳದ ಯುವಕರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಬಿಡುಗಡೆ ಮಾಡಿದ್ದು, ಆರೋಪಿಯನ್ನು ಮಂಗಳವಾರ ಮಧ್ಯಾಹ್ನ ಕೋರ್ಟ್’ ಗೆ ಹಾಜರುಪಡಿಸಿದ್ದಾರೆ.
ವೀರಾಜಪೇಟೆ ಉಪ ಅಧೀಕ್ಷಕ ನಿರಂಜನ್ ದಾಸ್ ಅರಸ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಶಿವ ರುದ್ರಪ್ಪ, ಸಬ್ ಇನ್ಸ್ಪೆಕ್ಟರ್ ಶ್ರೀಧರ, ಪ್ರೊಬೆಷನರಿ ಇನ್ಸ್ಪೆಕ್ಟರ್ ಮಂಜುನಾಥ್, ಕ್ರೈಮ್ ಬ್ರಾಂಚ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.