ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣದ ವೇಳೆ ತಿನ್ನಲು ಕುಡಿಯಲು ಏನು ಕೊಟ್ಟರೂ ಬೇಡ ಬೇಡ ಎಂದು ಹೇಳುತ್ತಿದ್ದ ಪ್ರಯಾಣಿಕನೋರ್ವನನ್ನು ಏರ್ಪೋರ್ಟ್ ಪೊಲೀಸರು ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಬಂಧಿಸಿದ್ದಾರೆ.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಸೌದಿ ಅರೇಬಿಯಾದ ಜೆಡ್ಡಾದಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾದ ಎಐ992 ಪ್ರಯಾಣಿಕನೋರ್ವ ಈ ಸುದೀರ್ಘ ಪ್ರಯಾಣದಲ್ಲಿ ಎಲ್ಲಿಯೂ ಒಂದೇ ಒಂದು ಗುಟುಕು ನೀರು ಸೇರಿದಂತೆ ಏನನ್ನೂ ಕುಡಿದಿರಲಿಲ್ಲ ಸೇವಿಸಿಯೂ ಇರಲಿಲ್ಲ, ವಿಮಾನದಲ್ಲಿರುವ ಸಿಬ್ಬಂದಿ ಹಲವು ಸಲ ಈತನಿಗೆ ಆಹಾರ ಆಫರ್ ಮಾಡಿದ್ದಾರೆ, ನೀರು ಕಾಫಿ, ಟೀ, ಪಾನಿಯಗಳನ್ನು ಬೇಕಾ ಎಂದು ಕೇಳಿದ್ದಾರೆ. ಆದರೆ ಆತ ಒಮ್ಮೆಯೂ ಏನನ್ನೂ ಕುಡಿದಿರಲಿಲ್ಲ, ಈ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿಗೆ ಈತನ ನಡವಳಿಕೆ ಬಗ್ಗೆ ಅನುಮಾನ ಬಂದಿದ್ದು, ಅವರು ಸೀದಾ ಪೈಲಟ್ ಬಳಿ ವಿಚಾರ ತಿಳಿಸಿದ್ದಾರೆ. ಅಲ್ಲದೇ ಆತನ ಮೇಲೆ ಒಂದು ಕಣ್ಣಿಟ್ಟಿದ್ದಾರೆ.
ಇದಾದ ನಂತರ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ತುಂಬಾ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ವೇಳೆ ಆತ ಗ್ರೀನ್ ಕಸ್ಟಮ್ಸ್ ಕ್ಲಿಯರೆನ್ಸ್ ಚಾನೆಲ್ ಮೂಲಕ ಪಾಸಾಗಲು ಯತ್ನಿಸಿದ್ದಾನೆ. ಆದರೆ ಅಲ್ಲಿ ಅವನನ್ನು ತಡೆದ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಆತನನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹಲವು ಪ್ರಶ್ನೆಗಳನ್ನು ಕೇಳಿ ವಿಚಾರಿಸಿದಾಗ ಆತ ತಾನು ತನ್ನ ಗುದನಾಳದಲ್ಲಿ ಚಿನ್ನ ಇಟ್ಟುಕೊಂಡಿರುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ನಾಲ್ಕು ಮೊಟ್ಟೆಯಕಾರಾದ ಕ್ಯಾಪ್ಸುಲ್ನಲ್ಲಿ ತುಂಬಿದ್ದ, ಸುಮಾರು 69 ಲಕ್ಷ ಮೌಲ್ಯದ ಪೇಸ್ಟ್ ರೂಪದಲ್ಲಿದ್ದ ಚಿನ್ನವನ್ನು ಈತ ಗುದನಾಳದಲ್ಲಿಟ್ಟು ಸ್ಮಗ್ಲಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.
ಈತನಿಂದ ಒಟ್ಟು 1096.76 ಗ್ರಾಂ ಅಂದರೆ ಸುಮಾರು ಒಂದು ಕೇಜಿಯಷ್ಟು ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಮ್ಸ್ ಜಂಟಿ ಕಮೀಷನರ್ ಮೋನಿಕಾ ಯಾದವ್ ಹೇಳಿದ್ದಾರೆ. ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳಡಿ ಈತನನ್ನು ಬಂಧಿಸಲಾಗಿದೆ. ಈತ ಜೆಡ್ಡಾದಿಂದ ಚಿನ್ನ ಕಳ್ಳಸಾಗಣೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.