ಹೊಸದಿಗಂತ ವರದಿ, ಮಂಡ್ಯ :
ಜೈಲಿನ ಆವರದೊಳಗೆ ಗಾಂಜಾ, ಮೊಬೈಲ್ಗಳನ್ನು ಎಸೆಯುತ್ತಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಉಪ ಕಾರಾಗೃಹದ ಬಳಿ ನಡೆದಿದೆ.
ನಗರದ ಹಾಲಹಳ್ಳಿ ಬಡಾವಣೆಯ ಸತೀಶ್ಚಂದ್ರ ಹಾಗೂ ಚಂದ್ರಶೇಖರ್ ಅವರನ್ನು ಬಂಧಿಸಲಾಗಿದೆ.
ಘಟನೆ ವಿವರ :
ಆರೋಪಿ ಚಂದ್ರಶೇಖರ ಕಾರಾಗೃಹ ಕಾಂಪೌಂಡ್ ಹೊರಗಿನಿಂದ ಒಳ ಭಾಗಕ್ಕೆ ಗಾಂಜಾ ತುಂಬಿದ ಪ್ಲಾಸ್ಟಿಕ್ ಕವರ್ ಹಾಗೂ ಮೊಬೈಲ್ಗಳನ್ನು ಎಸೆಯುತ್ತಿದ್ದರೆ, ಮತ್ತೊಬ್ಬ ಆರೋಪಿ ಸತೀಶ್ಚಂದ್ರ ದ್ವಿಚಕ್ರ ವಾಹನ ಹಿಡಿದು ನಿಂತಿದ್ದ. ಇದನ್ನು ಗಮನಿಸಿದ ಕಾರಾಗೃಹ ಸಿಬ್ಬಂದಿ ಕಾರ್ತೀಕ್ ತಕ್ಷಣ ಓಡಿಬಂದು ಸತೀಶ್ಚಂದ್ರನನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಆತನ ಬಳಿ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿದ ಗಾಂಜಾ ಮತ್ತು 5 ಸ್ಯಾಮ್ಸಂಗ್ ಮೊಬೈಲ್, ಒಂದು ನೋಕಿಯಾ ಮೊಬೈಲ್ಗಳನ್ನು ಪತ್ತೆಯಾದವು.
ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕಾರಾಗೃಹದಲ್ಲಿರುವ ವಿಚಾರಣಾ ಖೈದಿಗಳಾದ ಧನುಷ್ ಮತ್ತು ಸ್ವರೂಪ್ಗೌಡ ಅವರುಗಳು ತಮಗೆ ಕರೆ ಮಾಡಿ ಮೊಬೈಲ್ ಹಾಗೂ ಗಾಂಜಾವನ್ನು ಕಾರಾಗೃಹದೊಳಗೆ ಎಸೆದಲ್ಲಿ ಹಣ ಸಂದಾಯ ಮಾಡಿಸುವುದಾಗಿ ತಿಳಿಸಿದ್ದರು. ಅದರಂತೆ ನಾವು ಗಾಂಜಾ ಮತ್ತು ಮೊಬೈಲ್ಗಳನ್ನು ಕಾರಾಗೃಹದ ಹೊರ ಭಾಗದಿಂದ ಒಳಕ್ಕೆ ಎಸೆಯುತ್ತಿದ್ದುದ್ದಾಗಿ ತಿಳಿಸಿದ್ದಾನೆ.
ಆರೋಪಿಗಳ ಮಾಹಿತಿ ಮೇರೆಗೆ ಕಾರಾಗೃಹದ ಬ್ಯಾರ್ನ ಎ-2 ಕೊಠಡಿಯನ್ನು ತಪಾಣೆ ನಡೆಸಲಾಗಿ ಕೊಠಡಿಯ ಶೌಚಾಲಯದೊಳಗೆ 2 ಮೊಬೈಲ್ಗಳು ಪತ್ತೆಯಾಗಿವೆ. ಈ ಸಂಬಂಧ ವಿಚಾರಾಣಾಧೀನ ಖೈದಿಗಳಾದ ಧನುಷ್ ಮತ್ತು ಸ್ವರೂಪ್ಗೌಡ ಹಾಗೂ ಕಾರಾಗೃಹದೊಳಗೆ ಗಾಂಜಾ ಮತ್ತು ಮೊಬೈಲ್ ಎಸೆಯುತ್ತಿದ್ದ ಚಂದ್ರಶೇಖರ್, ಸತೀಶ್ಚಂದ್ರ ಅವರ ವಿರುದ್ಧ ದೂರು ನೀಡಲಾಗಿದೆ.
ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದುಘಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.