ಹೊಸದಿಗಂತ ವರದಿ ಬೆಳಗಾವಿ:
ಅ.23ರಂದು ನಡೆಯಲಿರುವ ಚೆನ್ಮಮ್ಮನ ಕಿತ್ತೂರು ಉತ್ಸವದ ನಿಮಿತ್ತ ನಗರಕ್ಕೆ ಆಗಮಿಸಿದ ಕಿತ್ತೂರು ಜ್ಯೋತಿಯನ್ನು ಸ್ವಾಗತಿಸಿ, ಡೋಲು ಬಾರಿಸುವ ಮೂಲಕ ಗಣ್ಯರು ಮತ್ತು ಅಧಿಕಾರಿಗಳು ಸಂಭ್ರಮಿಸಿದರು.
ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್ ನಲ್ಲಿಯ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಮಹಾಪೌರರಾದ ಶೋಭಾ ಸೋನವಾಚೆ, ಉಪಮಹಾಪೌರ ರೇಷ್ಮಾ ಪಾಟೀಲ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಸೊಂಟಕ್ಕೆ ಡೊಳ್ಳು ಕಟ್ಟಿಕೊಂಡು ಡೋಲು ಬಾರಿಸಿ ಸಂಭ್ರಮಿಸಿದರಲ್ಲದೇ, ಕೆಲ ಹೊತ್ತು ಮೆರವಣಿಗೆಯಲ್ಲಿ ಸಾಗಿ ಗಮನ ಸೆಳೆದರು.
ಡೊಳ್ಳು ಕುಣಿತದವರು, ಝಾಂಜ್ ಮೇಳದವರೊಂದಿಗೆ ನಗರಕ್ಕೆ ಆಗಮಿಸಿರುವ ಈ ಕಿತ್ತೂರು ಜ್ಯೋತಿ ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ.
ಶಾಸಕ ಬಾಬಾಸಾಹೇಬ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಸೇರಿದಂತೆ ಅನೇಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.