– ವಾಗೀಶ ಪಾಟೀಲ್
ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೆಳನ ನಡೆಯುತ್ತಿದ್ದು, ಕನ್ನಡ ಸಾಹಿತ್ಯ ಸಮ್ಮೆಳನದ ಎರಡೆನೇ ದಿನದಂದು ಫಲ ಪುಷ್ಪ ಜನರ ಗಮನ ಸೆಳೆದಿದೆ. ಸಿರಿಧಾನ್ಯ, ಹೂವು, ಹಣ್ಣುಗಳಲ್ಲಿ ತಯಾರಾದ ಕಲಾಕೃತಿಗಳನ್ನು ಕಂಡು ಜನರು ಮಾರುಹೋಗಿದ್ದಾರೆ. ಏಲಕ್ಕಿಯಲ್ಲಿ ಗಣಪ, ಸಿರಿಧಾನ್ಯದಲ್ಲಿ ಅರಳಿರುವ ತಾಯಿ ಭುವನೇಶ್ವರಿ, ಕನಕ, ಶರೀಫ ಮತ್ತು ಸರ್ವಜ್ಞರ ಮೂರ್ತಿಗಳು, ಶಾವಿಗೆಯಲ್ಲಿ ಪುನೀತರಾಜಕುಮಾರ, ಒಣ ದ್ರಾಕ್ಷಿಯಲ್ಲಿ ಸರ್ವಜ್ಞ, ಹೂವುಗಳಲ್ಲಿ ಪ್ರಾಣಿ, ಪಕ್ಷಿ, ಯೋಧರ ಸ್ಮಾರಕ, ವಿವಿಧ ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳು ಕಲಾವಿದರ ಕೈಚಳಕದಲ್ಲಿ ಅರಳಿದ್ದು ನೋಡುಗರ ಕಣ್ಣು-ಹೃದಯವನ್ನು ತಣಿಸುತ್ತಿವೆ.
ಜಿಲ್ಲಾ ಪಂಚಾಯತ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಫಲ ಪುಷ್ಪ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು. ಫಲಪುಷ್ಪ ಪ್ರದರ್ಶದ ಮಳಿಗೆಯನ್ನು ಪ್ರವೇಶಿಸಿದ ಕೂಡಲೇ ಮೊದಲಿಗೆ ಕಾಣುವುದೇ ಸಿರಿಧಾನ್ಯ ಅಲಂಕಾರ ಭೂಷಿತೆಯಾಗಿ ಕುಳಿತಿರುವ ತಾಯಿ ಭುವನೇಶ್ವರಿ. ಅದೇ ರೀರಿ ಹೂವುಗಳಲ್ಲಿ ಡಾಲ್ಫಿನ್ಗಳು, ಮತ್ಸಕನ್ಯೆ, ಕುಂಬಳಕಾಯಿಯಲ್ಲಿ ಗಂಟೆ, ಮೂಲಂಗಿ, ಗಜ್ಜರಿ ಹಾಗೂ ಬದನೆ ಕಾಯಿಯಲ್ಲಿ ಹದ್ದು, ನವಿಲು, ಹಾಗಲಕಾಯಿ ಮತ್ತು ಮೂಲಂಗಿಯಲ್ಲಿ ಮೊಸಳೆ, ಕಲ್ಲಂಗಡಿ ಹಾಗೂ ಕುಂಬಳಕಾಯಿಯನ್ನು ಬಳಸಿಕೊಂಡು ಗಂಟೆ, ಮೊಲದ ಮೂರ್ತಿಗಳನ್ನು ರಚಿಸಲಾಗಿದೆ.
ಗುಲಾಬಿ ಮತ್ತಿತರ ಹೂವುಗಳನ್ನು ಬಳಸಿಕೊಂಡು ಹೂವಾಡಗಿತ್ತಿ, ಆನೆ, ನಂದಿ, ಶಿವಲಿಂಗ, ಹುತಾತ್ಮ ಸೈನಿಕರ ಸ್ಮಾರಕ, ವಾದ್ಯಾವಾದಕಗಳಾದ ಸಿತಾರ, ತಬಲಾ ಹಾಗೂ ಚಂಡೆ ವಾದ್ಯ, ಬಾತುಕೋಳಿ ಸೇರಿದಂತೆ ಇನ್ನು ಕೆಲ ಕಲಾಕೃತಿಗಳಿ ಅರಳಿವೆ. ರಂಗೋಲಿಯಲ್ಲಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರಗಳನ್ನು ಬಿಡಿಸಲಾಗಿದೆ.
ಏಲಕ್ಕಿಯಲ್ಲಿ ಗಣೇಶನ ಮೂರ್ತಿ, ಒಣ ದ್ರಾಕ್ಷಿಯಲ್ಲಿ ಆದಿ ಕವಿ ಸರ್ವಜ್ಞ ಮೂರ್ತಿಯನ್ನು ತಯಾರಿಸಲಾಗಿದೆ. ಸರ್ವಜ್ಞನನ್ನು ಇರಿಸಿರುವ ಮಂಟಪವನ್ನು ವಿವಿಧ ತರಕಾರಿ, ಹಣ್ಣು, ಕಾಯಿ, ಪುಷ್ಪಗಳಿಂದ ರಚಿಸಲಾಗಿದೆ. ಅದೇ ರೀತಿ ದಿವಗಂತ ನಟ ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನು ಶ್ಯಾವಿಗೆಯಲ್ಲಿ ರಚಿಸಿದ್ದಾರೆ. ಕಲ್ಲಗಂಡಿ ಹಣ್ಣಿನಲ್ಲಿ ಅಪ್ಪು ಅವರ ನಗು ಮುಖದ ವಿವಿಧ ಭಂಗಿಗಳನ್ನು ಕಂಡು ಜನ ಮನಸೋತು ತಮ್ಮ ಮೊಬೈಲ್, ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿಕೊಂಡರು.
ಫಲ ಪುಷ್ಪ ಪ್ರದರ್ಶನದಲ್ಲಿ ಹೂವು, ತರಕಾರಿ ಬಾಡದಂತಿರಲು ಕಲಾಕೃತಿಗಳ ಮೇಲೆ ತುಂತುರು ನೀರಾವರಿ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷವಾಗಿ ಹೂಗಳ ಬಾಡದಂತೆ ರಸಾಯನಿಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಭಾನುವಾರದವರೆಗೂ ಹೂ ಮತ್ತು ತರಕಾರಿಗಳು ಬಾಡದಂತೆ ಎಚ್ಚರ ವಹಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರದೀಪ್ ತಿಳಿಸಿದರು.
ಸಮ್ಮೇಳನದಲ್ಲಿ ಫಲ ಪುಷ್ಪ ಪ್ರದರ್ಶನ ಪ್ರಮುಖ ಆಕರ್ಶಣೆಯಾಗಿದೆ. ಈ ಕಲಾಕೃತಿಗಳನ್ನು ನೋಡಿದರೆ ಮನಸ್ಸು ಅರಳಿದಂತಾಗುತ್ತಿದೆ, ತರಕಾರಿ, ಹೂ, ಕಾಯಿಗಳನ್ನು ಬಳಸಿಕೊಂಡು ಈರೀತಿ ಕಲಾಕೃತಿಗಳನ್ನು ತಯಾರಿಸಬಹುದು ಎನ್ನುವುದನ್ನು ನೋಡಿ ಅಚ್ಚರಿ ಹಾಗೂ ಕುತೂಹಲ ಮೂಡಿದೆ. ಹಾಳಾದ ವಸ್ತುಗಳನ್ನು ಬಳಸಿಕೊಡು ಇದೇ ರೀತಿ ಕಲಾಕೃತಿಗಳನ್ನು ಮಾಡಿ ಮನೆಯನ್ನು ಅಲಂಕರಿಕವಾಗಿ ಇಟ್ಟುಕೊಳ್ಳಬಹುದು ಎಂದು ಕಲಾಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.