ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಮತ್ತು ರಷ್ಯಾ ಅಧ್ಯಕ್ಷರು ಪರಸ್ಪರ ಕುಳಿತು ಶಾಂತಿ ಸ್ಥಾಪನೆಯ ಯತ್ನವಾಗಿ ಚರ್ಚಿಸಬೇಕು. ಸ್ನೇಹಿ ರಾಷ್ಟ್ರವಾಗಿ ಭಾರತ ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಹಕಾರ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದ ಮೋದಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದು, ಈ ವೇಳೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳಿಂದಲೇ ಶಾಂತಿ ಸ್ಥಾಪನೆ ಅಗತ್ಯ ಎಂದು ಪುನರುಚ್ಚರಿಸಿದ್ದಾರೆ.
ಭೇಟಿಯ ಬಳಿಕ ಉಭಯ ಮುಖಂಡರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ನಾನು ಶಾಂತಿ ಸಂದೇಶದೊಂದಿಗೆ ಕೀವ್ಗೆ ಬಂದಿದ್ದೇನೆ. ಗುರಿ ಸಾಧನೆಗಾಗಿ ಆದಷ್ಟು ಶೀಘ್ರ ಉಭಯ ದೇಶಗಳ ನಾಯಕರು ಮುಖಾಮುಖಿ ಕುಳಿತು ಚರ್ಚಿಸಬೇಕು’ ಎಂದು ಹೇಳಿದ್ದಾರೆ.
ಪರಿಹಾರವನ್ನು ಚರ್ಚೆ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಮಾತ್ರ ಕಂಡುಕೊಳ್ಳಹುದು. ನಾವು ಸಮಯ ವ್ಯರ್ಥ ಮಾಡದೇ ಅದೇ ಮಾರ್ಗದಲ್ಲಿ ಸಾಗಬೇಕು. ಪರಸ್ಪರ ಚರ್ಚಿಸಿ ಬಿಕ್ಕಟ್ಟಿಗೆ ಪರಿಹಾರ ಹುಡುಕಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.
ಶಾಂತಿ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಭಾರತ ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ. ವ್ಯಕ್ತಿಗತವಾಗಿ ಈ ಹೊಣೆ ನಿಭಾಯಿಸಲು ನಾನು ಸಿದ್ಧ ಎಂದರು.
ಮೋದಿ ಅವರ ಭೇಟಿಯು ಐತಿಹಾಸಿಕವಾದುದು ಉಭಯ ಮುಖಂಡರು ಬಣ್ಣಿಸಿದ್ದಾರೆ.