ಹೊಸ ದಿಗಂತ ಡಿಜಿಟಲ್ ಡೆಸ್ಕ್
ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಹೊರಬಿದ್ದಿದ್ದಾರೆ.ಕಳೆದೆರೆಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೇಗಿ ಅವೇಶ್ ಖಾನ್ ಇದೀಗ ಏಷ್ಯಾಕಪ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಅವರ ಬದಲಿಗೆ ಮೀಸಲು ಆಟಗಾರನಾಗಿ ದೀಪಕ್ ಚಹರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದಕ್ಕೂ ಮುನ್ನ ರವೀಂದ್ರ ಜಡೇಜಾ ಕೂಡ ಗಾಯಗೊಂಡು ಹೊರಬಿದ್ದಿದ್ದರು. ಅವರ ಸ್ಥಾನದಲ್ಲಿ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದರು.
ಇದೀಗ ಅವೇಶ್ ಖಾನ್ ಕೂಡ ಅರ್ಧದಲ್ಲೇ ಏಷ್ಯಾಕಪ್ನಿಂದ ಹೊರ ನಡೆದಿದ್ದು, ಹೀಗಾಗಿ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಮತ್ತೋರ್ವ ವೇಗಿ ದೀಪಕ್ ಚಹರ್ ಅವರನ್ನು ತಂಡಕ್ಕೆ ಸೇರಿಕೊಳ್ಳಲಾಗಿದೆ.
ಏಷ್ಯಾಕಪ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದರು. ಹಾಗೆಯೇ ಹರ್ಷಲ್ ಪಟೇಲ್ ಕೂಡ ಗಾಯದ ಕಾರಣ ಹೊರಗುಳಿದಿದ್ದರು. ಹೀಗಾಗಿ ತಂಡದಲ್ಲಿ ಅವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದರು. ಆದರೆ ಇಬ್ಬರು ಯುವ ವೇಗಿಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇದೀಗ ಅವೇಶ್ ಖಾನ್ ಹೊರಗುಳಿದಿರುವ ಕಾರಣ ದೀಪಕ್ ಚಹರ್ ಆಯ್ಕೆಯಾಗಿದ್ದಾರೆ.