ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಸುಹಾಸಿನಿ ಅದ್ಭುತ ನಟನೆ, ಮುಗ್ಧತೆಗೆ ಹೆಸರುವಾಸಿ. ಕನ್ನಡ, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿ ಹಲವು ಬ್ಲಾಕ್ಬಸ್ಟರ್ ಚಿತ್ರ ನೀಡಿದವರು. ಸುಹಾಸಿನಿ ಅವರು ತಮ್ಮ ಯಾವುದೇ ಚಿತ್ರಗಳಲ್ಲಿ ಅಶ್ಲೀಲತೆಯನ್ನು ತಂದುಕೊಟ್ಟಿಲ್ಲ. ಹೆಚ್ಚಾಗಿ ಸೀರೆಯಲ್ಲಿಯೇ ಕಾಣಿಸುವ ಇವರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ.
ಕೆಲ ದಿನಗಳ ಹಿಂದೆ ಅವರು ಓಟಿಟಿ ವೇದಿಕೆಯಲ್ಲಿ ಮಿತಿಮೀರುತ್ತಿರುವ ಅಶ್ಲೀಲತೆ ಕುರಿತು ಅವರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಶೂಟಿಂಗ್ ಸಮಯದಲ್ಲಿ ತಮಗಾಗಿರುವ ಕೆಟ್ಟ ಅನುಭವದ ಕುರಿತು ನಟಿ ಹೇಳಿದ್ದಾರೆ.
ಮೂಲತಃ ತಮಿಳಿನವರಾದರೂ ಕನ್ನಡದ್ದೇ ನಟಿಯಾಗಿ ಸುಹಾಸಿನಿ ಗುರುತು ಪಡೆದುಕೊಂಡಿದ್ದಾರೆ. ‘ಬೆಂಕಿಯಲ್ಲಿ ಅರಳಿದ ಗುಲಾಬಿ’, ‘ಬಂಧನ’, ‘ಸುಪ್ರಭಾತ’, ‘ಹಿಮಪಾತ’ ಹೀಗೆ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ಸುಹಾಸಿನಿ ಕನ್ನಡದಲ್ಲಿ ಮಾಡಿದ್ದಾರೆ. ಸುಹಾಸಿನಿ ಹಾಗೂ ವಿಷ್ಣುವರ್ಧನ್ ಜೋಡಿ ಬಹಳ ಜನಪ್ರಿಯವಾಗಿತ್ತು. ಈಗಲೂ ಸಹ ಆಗಾಗ್ಗೆ ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ ಸುಹಾಸಿನಿ. ಸದ್ಯ ಸಿನಿಮಾ ನಿರ್ದೇಶಕ ನಿರ್ಮಾಣದಲ್ಲಿಯೂ ಆಸಕ್ತಿ ಬೆಳೆಸಿಕೊಂಡ ಸುಹಾಸಿನಿ, ಪತಿ ಮಣಿರತ್ನಂ ಅವರ ಜೊತೆ ಮದ್ರಾಸ್ ಟಾಕೀಸ್ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.
ತಮಗೆ ಸಿನಿಮಾದಲ್ಲಿ ಛಾನ್ಸ್ ಸಿಗದಿದ್ದರೂ ಪರವಾಗಿಲ್ಲ. ಆದರೆ ಯಾರ ಮುಲಾಜಿಗೂ ನಟಿ ಜಗ್ಗಲ್ಲ ಎಂದೇ ಹೇಳಲಾಗುತ್ತದೆ. ತಮಗೆ ಸರಿಕಾಣದ್ದನ್ನು ಸ್ಪಷ್ಟವಾಗಿ ಹೇಳುವ, ನಿರಾಕರಿಸುವ ಗುಣವನ್ನು ಆಗಲೇ ತಾವು ಹೊಂದಿರುವುದಾಗಿ ಈಗ ನಟಿ ಕೂಡ ಹೇಳಿದ್ದಾರೆ.ಆಗಿನ್ನೂ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು ವೃತ್ತಿ ಆರಂಭಿಸಿದ್ದೆಯಷ್ಟೇ. ಸಿನಿಮಾ ಒಂದರ ಚಿತ್ರೀಕರಣದ ಸಂದರ್ಭದಲ್ಲಿ, ನಟನ ತೊಡೆಯ ಮೇಲೆ ಕುಳಿತುಕೊಳ್ಳುವ ದೃಶ್ಯವೊಂದರಲ್ಲಿ ನಟಿಸಬೇಕೆಂದು ನಿರ್ದೇಶಕರು ಹೇಳಿದ್ದರು. ಆದರೆ ನಾನು ಒಪ್ಪಲಿಲ್ಲ. ಅವರು ಎಷ್ಟೇ ಹೇಳಿದರೂ ನಾನು ಅದನ್ನು ಕೇಳಲಿಲ್ಲ. ನನಗೆ ಅದು ಸಾಧ್ಯವಿಲ್ಲ, ಆ ಸೀನ್ ಬದಲಿಸಿ ಎಂದು ಪಟ್ಟು ಹಿಡಿದಿದ್ದೆ. ಕೊನೆಗೆ ನಿರ್ದೇಶಕರು ನನಗೆ ಮಣಿಯಲೇಬೇಕಾಯಿತು ಎಂದು ನಟಿ ಹೇಳಿದ್ದಾರೆ.
ಅದೇ ರೀತಿ ನಾಯಕ ಕಚ್ಚಿದ ಐಸ್ಕ್ರೀಂ ತಿನ್ನುವಂತೆ ಒತ್ತಾಯಿಸಿದ ಘಟನೆಯನ್ನೂ ನಟಿ ಹೇಳಿಕೊಂಡಿದ್ದಾರೆ. ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ನಾಯಕ ತಿಂದ ಐಸ್ಕ್ರೀಂ ಅನ್ನು ಹೀರೋಯಿನ್ ಆಗಿರೋ ನಾನು ತಿನ್ನಬೇಕಿತ್ತು. ಆದರೆ ಅದು ನನಗೆ ಅಸಹ್ಯ ಎನಿಸಿತು. ಹೀಗೆ ಎಂಜಲು ತಿನ್ನುವುದು ನನಗೆ ಅಹಸ್ಯವಾಗಿತ್ತು. ಅದಕ್ಕೆ ತಕರಾರು ತೆಗೆದು ಅದು ಸಾಧ್ಯವೇ ಇಲ್ಲ ಎಂದೆ. ನಿರ್ದೇಶಕರು ಆ ದೃಶ್ಯವನ್ನು ಬದಲಾಯಿಸಿದರು ಎಂದು ಸುಹಾಸಿನಿ ಹೇಳಿದ್ದಾರೆ.