ಹೊಸದಿಗಂತ ವರದಿ, ಮದ್ದೂರು
15 ವರ್ಷಗಳ ಹಿಂದೆ ಮಸೀದಿ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಖುಲಾಸಿಗೊಳಿಸಿ ಜೆಎಂಎಫ್ ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆಟೋ ಸಿದ್ದಪ್ಪಾಜಿ, ಪಂಚಮಿ ಗುರುಸ್ವಾಮಿ, ಮೃತ್ಯಂಜಯ, ನೈದಿಲೆ ಚಂದ್ರುಘಿ, ಎಂ.ಎಸ್. ಜಗನ್ನಾಥ್, ಪಿ.ಹುಚ್ಚಪ್ಪ ಹಾಗೂ ಎಂ.ಎಸ್. ವೀರಭದ್ರಸ್ವಾಮಿ ಸೇರಿದಂತೆ 28 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆದಿತ್ಯಾ ಆರ್. ಕಲಾಲ್ ತೀರ್ಪು ನೀಡಿದ್ದಾರೆ.
2007ರ 11ರಂದು ಪಟ್ಟಣದಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಗವಾಧ್ವಜವನ್ನು ಹಾರಿಸಲಾಗಿತ್ತು. ಅಂದು ರಾತ್ರಿ ಒಂದು ಕೋಮಿನ ಕೆಲ ಕಿಡಿಗೇಡಿಗಳು ಹಳೇ ವಿಜಯಾಬ್ಯಾಂಕ್ನ ಹೂವಿನ ಸರ್ಕಲ್ನಲ್ಲಿ ಹಾರಿಸಲಾಗಿದ್ದ ಭಗವಾಧ್ವಜಕ್ಕೆ ಬೆಂಕಿ ಹಾಕಿ ಸುಟ್ಟುಹಾಕಿದ್ದರು.
ಇದರಿಂದ ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಹೊಳೇ ಬೀದಿಯಲ್ಲಿದ್ದ ಮಸೀದಿಗೆ ನುಗ್ಗಿ ದಾಂಧಲೆ ನಡೆಸಿ ಧರ್ಮ ಧ್ವಜ ಹಾಗೂ ಸಮಾದಿಗೆ ಹೊದಿಸಲಾಗಿದ್ದ ಚಾದರ್ನ್ನು ಸುಟ್ಟುಹಾಕಿದ್ದರು. ಈ ಸಂಬಂಧ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ