ಹೊಸದಿಗಂತ ವರದಿ, ಬೆಂಗಳೂರು:
ಅಕ್ರಮ ಹುಕ್ಕಾ ಉತ್ಪನ್ನಗಳ ಮಾರಾಟ ಹಾಗೂ ವಿತರಕರ ಮೇಲೆ ದಾಳಿ ನಡೆಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಲದ ಸಿಬ್ಬಂದಿ ಸುಮಾರು 1.45 ಕೋಟಿ ರೂ ಮೌಲ್ಯದ ನಿಷೇಧಿತ ತಂಬಾಕು/ ನಿಕೋಟಿನ್ ಉತ್ಪನ್ನಗಳನ್ನು ಯಾವುದೇ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು ಮೂಲದ ಮುರಳೀಧರ್ (59), ಇರೂದಯಾ ಆಂಥೋಣಿ(59), ಬೆಂಗಳೂರಿನ ಎಸ್.ಆರ್. ನಗರ ನಿವಾಸಿ ವಿಶ್ವನಾಥ್ ಪ್ರತಾಪ್ ಸಿಂಗ್(26), ಭರತ್ (29), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಡಿಬೇಡಳ ಮಧು(36), ಹರಿಕೃಷ್ಣ( 35), ಚಿರಕೂರಿ ರಮೇಶ್ (30), ದಿವಾಕರ್ ಚೌಧರಿ(30), ಮಹದೇವಪುರ ಮಧು(38) ಬಂಧಿತರು. ಈ ಪೈಕಿ ಮುರಳೀಧರ್, ಆಂಥೋಣಿ, ವಿಶ್ವನಾಥ್ ಹಾಗೂ ಪ್ರತಾಪ್ ಸಿಂಗ್ ಆರೋಪಿಗಳ ವಿರುದ್ಧ ಚಾಮರಾಜಪೇಟೆ ಹಾಗೂ ಇನ್ನುಳಿದವರ ವಿರುದ್ದ ರಾಮಮೂರ್ತಿನಗರ ಠಾಣೆ, ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ತಿಳಿಸಿದ್ದಾರೆ.
ಬೆಂಗಳೂರಿಗೆ ಪ್ರಮುಖ ವಿತರಕನಾಗಿರುವ ಆರೋಪಿ ಮುರಳೀಧರ್, ನಗರದ ಚಾಮರಾಜಪೇಟೆಯಲ್ಲಿ ಹುಕ್ಕಾ ಉತ್ಪನ್ನ ಮಾರಾಟ ಮಳಿಗೆ ಹೊಂದಿದ್ದಾನೆ. ಇತರೆ ಆರೋಪಿಗಳು ವಿತರಕರಾಗಿ ಕಾಯ ನಿರ್ವ ಹಿಸುತ್ತಿದ್ದರು. ಜತೆಗೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಿಷೇಧ ಹುಕ್ಕಾ ಉತ್ಪನ್ನಗಳನ್ನು ಈತ ದುಬೈನಿಂದ ತರಿಸಿಕೊಳ್ಳುತ್ತಿದ್ದ. ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ಅಪ್ಪಲ್ ಎಂಬ ಹೆಸರಿನ ಮೊಲಾಸಿನ್, ದಿಲ್ಬಾಗ್, ಜೆಡ್ ಎಲ್-1, ಆಕ್ಷನ್-7, ಬಾದ್ಷಾ, ಮಹಾರಾಯಲ್-717 (ಹುಕ್ಕಾ ಬಾರ್ಗೆ ಬಳಸುವ ಉತ್ಪನ್ನ) ಸೇರಿದಂತೆ ಇತರೆ ಉತ್ಪನ್ನಗಳನ್ನು ಸಾರ್ವ ಜನಿಕರು ಹಾಗೂ ಇತರೆ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ವ್ಯಾಪಾರದಲ್ಲೇ ತಿಂಗಳಿಗೆ ಸುಮಾರು 25 ಕೋಟಿ ರೂ. ವಹಿವಾಟು ನಡೆಸುತ್ತಿದನು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಪೊಲೀಸರು, ಫೆ. 9 ರಂದು ಆರೋಪಿಗಳ ಗೋದಾಮಿನ ಮೇಲೆ ದಾಳಿ ನಡೆಸಿ, ಸುಮಾರು 1.45 ಕೋಟಿ ರೂ ಮೌಲ್ಯದ ತಂಬಾಕು/ ನಿಕೋಟಿನ್ ಉತ್ಪನ್ನಗಳು, 11 ಮೊಬೈಲ್ಗಳು, ಚಿನ್ನ-ಬೆಳ್ಳಿ ನಾಣ್ಯಗಳು, 1.10 ಲಕ್ಷ ನಗದು ಹಾಗೂ ಒಂದು ಟಾಟಾ ಏಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹುಕ್ಕಾ ಖರೀದಿಗೆ ಉಡುಗೊರೆ:
ಆರೋಪಿಗಳಿಂದ ಸುಮಾರು ಹತ್ತಕ್ಕೂ ಹೆಚ್ಚು ಹುಕ್ಕಾ ಉತ್ಪನ್ನಗಳನ್ನು ಗ್ರಾಹಕರು ಖರೀದಿ ಮಾಡಿದರೆ, ಉಡುಗೊರೆಯಾಗಿ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ನೀಡಲಾಗುತ್ತಿತ್ತು. ಜತೆಗೆ ಸ್ಯಾಚ್ ಕೂಪನ್ ಕೂಡ ಕೊಡುತ್ತಿದ್ದರು. ಈ ರೀತಿ ವ್ಯಾಪಾರ ವಹಿವಾಟನ್ನು ನಡೆಸಲಾಗುತ್ತಿತ್ತು. ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.