ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಒಂದು ವಾರ ಮಾತ್ರ ಬಾಕಿ ಇದೆ. ಇತ್ತ ರಾಮ ಮಂದಿರ ವಿಚಾರದಲ್ಲಿ ರಾಜಕೀಯವು ಜೋರಾಗಿದೆ.
ಆಯೋಧ್ಯೆ ರಾಮ ಮಂದಿರಕ್ಕೆ ಇಂದು ಕೆಲ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ಆಯೋಧ್ಯೆ ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಧ್ವಜ ಹಿಡಿದು ಮೆರವಣಿಗೆ ಪ್ರಯತ್ನ ಮಾಡಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಧಾರ್ಮಿಕ ಸ್ಥಳದ ಆವರಣದಲ್ಲಿ ರಾಜಕೀಯ ಧ್ವಜ ಮೆರೆಸುವ ಪ್ರಯತ್ನ ಬೇಡ ಎಂದು ಆಕ್ರೋಶಗೊಂಡ ಕೆಲವರು ಕಾಂಗ್ರೆಸ್ ಧ್ವಜ ಕಿತ್ತೆಸೆದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರಾದ ದೀಪೇಂದ್ರ ಹೂಡ, ಅಜಯ್ ರೈ, ಕಾಂಗ್ರೆಸ್ ಮಹಿಳಾ ಮೋರ್ಚಾ ನಾಯಕಿ ರೇಣು ರೈ ಸೇರಿದಂತೆ ಹಲವು ನಾಯಕರು ಇಂದು ಆಯೋಧ್ಯೆಗೆ ಭೇಟಿ ನೀಡಿದ್ದಾರೆ. ಸರಯು ನದಿಯಲ್ಲಿ ಮಿಂದು ಶ್ರೀರಾಮಲಲಾ ದರ್ಶನ ಪಡೆಯಲು ತೆರಳಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆಗೆ ಬೆಂಬಲಿಗರು, ಜಿಲ್ಲಾ ನಾಯಕರು ತೆರಳಿದ್ದಾರೆ. ಈ ವೇಳೆ ಮಹಿಳಾ ಮೋರ್ಚಾ ನಾಯಕಿ ಹಾಗೂ ಇತರ ಕಾಂಗ್ರೆಸ್ ನಾಯಕರು ಪವಿತ್ರ ಧಾರ್ಮಿಕ ಸ್ಥಳವಾದ ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾರಾಡಿಸಿದ್ದಾರೆ.
ಪವಿತ್ರ ಧಾರ್ಮಿಕ ಆವರಣದಲ್ಲಿ ರಾಜಕೀಯ ಧ್ವಜ ಯಾಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ರೋಗೊಂಡ ಕೆಲವರು ಕಾಂಗ್ರೆಸ್ ಧ್ವಜ ಕಿತ್ತೆಸೆದಿದ್ದಾರೆ. ಜೈಶ್ರೀರಾಮ್ ಘೋಷಣೆ ಕೂಗುತ್ತಾ ಕಾಂಗ್ರೆಸ್ ಧ್ವಜ ಕಿತ್ತೆಸೆದಿದ್ದಾರೆ.
ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದಂತೆ ಪೊಲೀಸರು ನಿಯಂತ್ರಿಸಿದ್ದಾರೆ.