ಹೊಸದಿಗಂತ ವರದಿ ಹುಬ್ಬಳ್ಳಿ:
ಹಳೆ ಹುಬ್ಬಳ್ಳಿ ಬೇಪಾರಿ ಫ್ಲಾಟ್ ಬಳಿ ಗುರುವಾರ ರಾತ್ರಿ ನಡೆದ ಚಾಕು ಇರಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರು ಗುಗ್ಗರಿ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಚಂದ್ರು ಗುಗ್ಗರಿ ಆಟೋ ಚಾಲಕನಾಗಿದ್ದು, ಎಂದಿನಂತೆ ಆಟೋ ಓಡಿಸುತ್ತಿದ್ದಾಗ ಬೇಪಾರಿ ಫ್ಲಾಟ್ ಬಳಿ ವಿನಾಯಕ ಮತ್ತು ಕಿರಣ ಭಜಂತ್ರಿ ಎಂಬವರ ಸಹೋದರಿಗೆ ಚಂದ್ರು ಚುಡಾಯಿಸುತ್ತಿದ್ದ ಎಂಬ ಕಾರಣಕ್ಕೆ ಚಾಕುವಿನಿಂದ ತಲೆ, ಬೆನ್ನು, ಕುತ್ತಿಗೆ ಇರಿದಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಚಂದ್ರನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇನ್ನು ಈ ಪ್ರಕರಣದ ಕುರಿತು ಹಳೆ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಈಗಾಗಲೇ ಚಾಕು ಇರಿದ ವಿನಾಯಕ ಮತ್ತು ಕಿರಣ ಎಂಬಾತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.