ಹೊಸದಿಗಂತ ಡಿಜಿಟಲ್ ಡೆಸ್ಕ್:
ತುರ್ತು ಚಿಕಿತ್ಸೆ ಹಾಗೂ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳಲ್ಲಿ ಭಾಗಿಯಾಗದ ಕಾರಣ ಆಯುರ್ವೇದದಂತಹ ಪರ್ಯಾಯ ಚಿಕಿತ್ಸಾ ಪದ್ಧತಿಗಳ ವೈದ್ಯರು ಅಲೋಪತಿ ವೈದ್ಯರಿಗೆ ಸಮನಾದ ವೇತನ ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಂಬಿಬಿಎಸ್ ವೈದ್ಯರಷ್ಟೇ ಸಮಾನವಾಗಿ ಆಯುರ್ವೇದ ವೈದ್ಯರು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಕೂಡ ಅಲ್ಲಗಳೆಯುವಂತಿಲ್ಲ ಎಂದಿದೆ.
ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮನಾದ ವೇತನ ಪಡೆಯಲು ಅರ್ಹರು ಎಂಬ 2012ರ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಸುಬ್ರಮಣಿಯನ್ ಹಾಗೂ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಪೀಠವು ಈ ಅಭಿಪ್ರಾಯ ತಳ್ಳಿಹಾಕಿದೆ. ಈ ವೇಳೆ ಮರಣೋತ್ತರ ಅಥವಾ ಶವಪರೀಕ್ಷೆಗಳನ್ನು ಆಯುರ್ವೇದ ವೈದ್ಯರು ಸಾಧ್ಯವಿಲ್ಲ ಎಂಬುದನ್ನು ಪೀಠ ಉಲ್ಲೇಖಿಸಿದೆ.
ಆಯುರ್ವೇದವು ದೇಶದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದ್ದಲ್ಲದೇ, ಹೆಮ್ಮೆಯ ಸ್ಥಾನವನ್ನೂ ಪಡೆದುಕೊಂಡಿದೆ. ಆದರೆ ಆಧುನಿಕ ಕಾಲದಲ್ಲಿ ಎಂಬಿಬಿಎಸ್ ವೈದ್ಯರು ನಡೆಸುವ ಶಸ್ತ್ರಚಿಕಿತ್ಸೆಗಳನ್ನು ಆಯುರ್ವೇದ ವೈದ್ಯರು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಸಮಾನ ವೇತನದ ಪ್ರಸ್ತಾಪ ಸರಿಯಲ್ಲವೆಂದು ನ್ಯಾಯಪೀಠ ತಿಳಿಸಿದೆ.