ಹೊಸದಿಗಂತ ವರದಿ ಬಾಗಲಕೋಟೆ:
ಸುಕ್ಷೇತ್ರ ತಿರುಪತಿ ತಿರುಮಲದಲ್ಲಿ ಶೀಘ್ರವೇ ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ಯಾತ್ರಿ ನಿವಾಸ ಲೊಕಾರ್ಪಣೆಗೊಳ್ಳಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ತಿರುಮಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಿ.ವಿ.ವಿ ಸಂಘದ ಯಾತ್ರಿನಿವಾಸ ಕಾಮಗಾರಿಯನ್ನು ವೀಕ್ಷಿಸಿದ ನಂತರ ಮಾಹಿತಿ ನೀಡಿದರು.
ಈಗಾಗಲೆ ಶ್ರೀಶೈಲದಲ್ಲಿ ಅನ್ನಛತ್ರವನ್ನು ನಿರ್ಮಾಣ ಮಾಡಲಾಗಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲಿ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಕಾರ್ಯಕ್ಕೆ ಬಿ.ವಿ.ವಿ ಸಂಘ ಮುಂದಾಗಿದೆ. ಅದರ ಮುಂದುವರಿದ ಭಾಗವಾಗಿ ತಿರುಪತಿ ತಿರುಮಲದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಸಂಘದ ಸದಸ್ಯರಾದ ಎಸ್.ಆರ್.ಮನಹಳ್ಳಿ,ರಾಜು ಮಲ್ಲನಗೌಡ ಪಾಟೀಲ, ಅಶೋಕಕುಮಾರ ಕಲ್ಯಾಣಶೆಟ್ಟಿ, ಬಸವರಾಜ ಕೆಂಧೂರ, ಪಂಡಿತ ಆರಬ್ಬಿ, ಡಾ.ಮಹಾಂತೇಶ ಕಡಪಟ್ಟಿ, ಸೇರಿದಂತೆ ಅನೇಕ ಸದಸ್ಯರು ಉಪಸ್ಥರಿತರಿದ್ದರು.