ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರ ರಾಜ್ಯ ಸದ್ಯ ಮತ್ತೆ ಮೊದಲಿನ ಸ್ಥಿತಿಯತ್ತ ಮುಖಮಾಡಿದ್ದು, ಎಲ್ಲಾ 11 ಜಿಲ್ಲೆಗಳಲ್ಲಿ ಕರ್ಫ್ಯೂ (Curfew) ಸಡಿಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಡೆದ ಹಿಂಸಾಚಾರದಲ್ಲಿ 60 ಜನರು ಸಾವನ್ನಪ್ಪಿದ್ದಾರೆ. 231 ಮಂದಿ ಗಾಯಗೊಂಡಿದ್ದಾರೆ. ಧಾರ್ಮಿಕ ಸ್ಥಳಗಳು ಸೇರಿದಂತೆ 1,700 ಮನೆಗಳನ್ನು ಸುಟ್ಟುಹಾಕಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (N. Biren Singh) ಮೇ 8 ರಂದು ಹೇಳಿದ್ದಾರೆ.
ಸದ್ಯ ರಾಜ್ಯದಾದ್ಯಂತ ಪರಿಸ್ಥಿತಿ ಸುಧಾರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಹಿಂಸಾಚಾರದ ಬಗ್ಗೆ ವರದಿ ಆಗಿಲ್ಲ. ಇಂಫಾಲ್ ಪಶ್ಚಿಮ ಮತ್ತು ಇಂಫಾಲ್ ಪೂರ್ವದಲ್ಲಿ ಇಂದು ಮುಂಜಾನೆ 5 ಗಂಟೆಯಿಂದ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ. ಇತರ ಒಂಬತ್ತು ಪೀಡಿತ ಜಿಲ್ಲೆಗಳಲ್ಲಿ ಇದೇ ರೀತಿಯ ಸಡಿಲಿಕೆಯನ್ನು ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇ 3 ರಂದು 10 ಗುಡ್ಡಗಾಡು ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ಈಶಾನ್ಯ ರಾಜ್ಯದಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದಿತ್ತು. ಮೀಸಲು ಅರಣ್ಯ ಭೂಮಿಯಿಂದ ಕುಕಿ ಗ್ರಾಮಸ್ಥರನ್ನು ಹೊರಹಾಕುವ ಬಗ್ಗೆ ಉದ್ವಿಗ್ನತೆಯಿಂದ ಮೆರವಣಿಗೆ ಹಿಂಸಾತ್ಮಕ ರೀತಿಗೆ ತಿರುಗಿತ್ತು.