ಹೊಸ ದಿಗಂತ ವರದಿ, ಶಿವಮೊಗ್ಗ:
ಕಾಂತರಾಜು ವರದಿ ಹೆಸರು ಹೇಳಿಕೊಂಡು ಹಿಂದುಳಿದ ವರ್ಗದವರ ಮೂಗಿಗೆ ತುಪ್ಪ ಸವರಿ ದ್ರೋಹ ಮಾಡಿದ್ದು ಸಿದ್ದರಾಮಯ್ಯ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿಗೋಸ್ಕರ ಸಿದ್ದರಾಮಯ್ಯ ಸರ್ಕಾರ 140 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಆದರೆ ವರದಿಯನ್ನು ಸದನದಲ್ಲಿ ಮಂಡನೆ ಮಾಡಲಿಲ್ಲ. ಇದು ದ್ರೋಹ ಅಲ್ವಾ? ನಾನು ಪರಿಷತ್ ವಿಪಕ್ಷ ನಾಯಕನಾಗಿದ್ದಾಗ ಪ್ರಶ್ನೆ ಮಾಡಿದ್ದೆ. ವರದಿಯನ್ನು ಇನ್ನೂ ಬೈಂಡಿಂಗ್ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ನಂತರ ನೋಡಿದರೆ ವರದಿ ಅಧಿಕೃತವೇ ಆಗಿರಲಿಲ್ಲ. ಅದಕ್ಕೆ ಕಾರ್ಯದರ್ಶಿ ಸಹಿಯನ್ನೇ ಹಾಕಿರಲಿಲ್ಲ ಎಂದರು.
ಇದು ಸಿದ್ದರಾಮಯ್ಯ ಹಿಂದುಳಿದ ವರ್ಗದವರಿಗೆ ಮಾಡಿದ ದ್ರೋಹ. ಈಗ ಅನೇಕ ವರ್ಗಗಳು ಮೀಸಲಾತಿ ಕೇಳುತ್ತಿವೆ. ಈ ಹಿನ್ನೆಲೆಯಲ್ಲಿ ಕುಲಶಾಸ ಅಧ್ಯಯನ ಮಾಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಲಾಗಿದೆ. ವರದಿ ಕೈ ಸೇರಿದ ಬಳಿಕ ಮೀಸಲಾತಿ ನಿರ್ಣಯ ಹೊರಬೀಳಲಿದೆ ಎಂದರು.