ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಐಪಿಎಲ್ ಮೊದಲ ಮ್ಯಾಚ್ ಗೆದ್ದ ಖುಷಿಯಲ್ಲಿರುವ ಆರ್ ಸಿಬಿ ಈಗ ಮುಂದಿನ ಪಂದ್ಯದತ್ತ ಮುಖಮಾಡಿದ್ದರೆ, ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದೆ.
ಈ ಬಾರಿ ಎಂ.ಎಸ್. ಧೋನಿ ಎಲ್ಲಾ ಪಂದ್ಯ ಆಡುವುದು ಅನುಮಾನವಾಗಿದೆ. ಅಭ್ಯಾಸದ ವೇಳೆ ಧೋನಿ ಕಾಲಿಗೆ ಗಾಯ ಮಾಡಿಕೊಂಡಿದ್ದು, ಈ ಕಾರಣದಿಂದ ಮೊದಲ ಆರು ಪಂದ್ಯಗಳಿಂದ ಅವರು ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ಗಾಗಿ ಕಳೆದ ಹಲವು ದಿನಗಳಿಂದ ಅಭ್ಯಾಸದಲ್ಲಿ ತೊಡಗಿದ್ದ ಧೋನಿ ಸದ್ಯ ಚೆನ್ನೈನಲ್ಲಿಯೇ ಉಳಿದುಗೊಂಡಿದ್ದು, ಉಳಿದ ಆಟಗಾರರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಗುವಾಹಟಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಧೋನಿ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಹೆಗಲಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಇರಲಿದ್ದು, ತಂಡಕ್ಕೆ ಬಲ ತುಂಬಲಿದ್ದಾರೆ. ಈ ಬಾರಿ ಧೋನಿ ಬ್ಯಾಟಿಂಗ್ ಮೇಲೆ ಮಾತ್ರ ಗಮನ ಹರಿಸುವ ಇಂಪ್ಯಾಕ್ಟ್ ಆಟಗಾರನಾಗಿ ಬಳಸಿಕೊಳ್ಳಲು ಮ್ಯಾನೇಜ್ಮೆಂಟ್ ಯೋಚಿಸುತ್ತಿದೆ.



