ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರದ ದೇಣಿಗೆ ವಿವಾದದ ಬೆನ್ನಲ್ಲೇ, ಉತ್ತರಾಖಂಡದ ಪವಿತ್ರ ಬದರಿನಾಥ ದೇವಾಲಯದಲ್ಲೂ ಕಾಣಿಕೆ ಹಣ ದುರುಪಯೋಗವಾಗಿರುವ ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸೂಕ್ತ ತನಿಖೆ ನಡೆಸಲು ಮೂವರು ಸದಸ್ಯರ ಹೈಲೆವೆಲ್ ಸಮಿತಿ ರಚಿಸಿದ್ದಾರೆ.
15 ದಿನಗಳಲ್ಲಿ ವರದಿ ನೀಡಲು ಹೈಲೆವೆಲ್ ಸಮಿತಿಗೆ ಗಡುವು
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಹೊರಡಿಸಿರುವ ಆದೇಶದಂತೆ, ಗರ್ವಾಲ್ ಕಮಿಷನರ್ ಆನಂದ್ ಸ್ವರೂಪ್ ನೇತೃತ್ವದಲ್ಲಿ ಈ ತನಿಖಾ ತಂಡ ಕಾರ್ಯನಿರ್ವಹಿಸಲಿದೆ. ತಂಡದಲ್ಲಿ ಎನ್ಹೆಚ್ಎಂ ಎಂಡಿ ಸಂದೀಪ್ ತಿವಾರಿ ಮತ್ತು ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾಣ್ ಇದ್ದಾರೆ. ದೇಣಿಗೆ ಎಣಿಕೆಯನ್ನು ಸಂಪೂರ್ಣ ಪಾರದರ್ಶಕಗೊಳಿಸುವ ಹೊಣೆ ಹೊತ್ತಿರುವ ಈ ಸಮಿತಿಯು ಮುಂದಿನ 15 ದಿನಗಳಲ್ಲಿ ಸರ್ಕಾರಕ್ಕೆ ವರದಿ ಹಾಗೂ ಕಠಿಣ ಶಿಫಾರಸುಗಳನ್ನು ಸಲ್ಲಿಕೆ ಮಾಡಬೇಕಿದೆ.
ದೇವಸ್ಥಾನದ ಖಾಸಗಿ ಕಾರ್ಯದರ್ಶಿ ಪ್ರಮೋದ್ ನೌಟಿಯಾಲ್ ಅಮಾನತು
ಮತ್ತೊಂದೆಡೆ, ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಆಂತರಿಕ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ, ಸಮಿತಿಯ ಖಾಸಗಿ ಕಾರ್ಯದರ್ಶಿ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಪ್ರಮೋದ್ ಹುದ್ದೆಯಲ್ಲಿದ್ದರೆ ಸಿಸಿಟಿವಿ ಸಾಕ್ಷ್ಯ ನಾಶಪಡಿಸುವ ಹಾಗೂ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ಈ ಆಕ್ಷನ್ ತಗೆದುಕೊಂಡಿದ್ದಾರೆ.



