ಹೊಸದಿಗಂತ ವರದಿ ಬಂಟ್ವಾಳ:
ಬಜರಂಗದಳದ ಗೋ ರಕ್ಷಾ ಪ್ರಮುಖ್ ಮೃತದೇಹ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
ಮೃತ ಯುವಕ ಬಜರಂಗಳದಳದ ಕಲ್ಲಡ್ಕ ಪ್ರಖಂಡದ ಗೋ ಪ್ರಮುಖ್ ರಾಜೇಶ್ ಪೂಜಾರಿ (28) ಇವರ ಮೃತದೇಹವು ಪಾಣೆಮಂಗಳೂರು ಹಳೆಯ ಸೇತುವೆ ಬಳಿ ಪತ್ತೆಯಾಗಿದೆ. ರಾಜೇಶ್ ಅವರಿಗೆ ಸೇರಿದ ದ್ವಿಚಕ್ರ ವಾಹನ ಸೇತುವೆ ಬಳಿ ಪತ್ತೆಯಾದ ಬಳಿಕ ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರ ತಂಡ ತೀವ್ರ ಹುಡುಕಾಟ ನಡೆಸಿತು. ಈ ಸಂದರ್ಭ ರಾಜೇಶ್ ಪೂಜಾರಿ ಮೃತದೇಹ ಪತ್ತೆಯಾಗಿದೆ.
ರಾಜೇಶ್ ಪೂಜಾರಿ ಸಾವಿನ ಕುರಿತು ನಿಖರ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆ, ಕೊಲೆ ಹಾಗೂ ಅಪಘಾತ ಈ ಮೂರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.