ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ, ದೇಶದಾದ್ಯಂತ ಸಂಭ್ರಮ, ಭಕ್ತಿ, ಶ್ರದ್ಧೆ ಹಾಗೂ ಜನರಲ್ಲಿ ಉತ್ಸಾಹ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಒಬ್ಬ ಸಂತ, ಶ್ರೇಷ್ಠ ವ್ಯಕ್ತಿ ಬಂದು ಈ ಮಹತ್ತರ ಕಾರ್ಯ ಮಾಡಲಿ ಎಂಬ ಉದ್ದೇಶದಿಂದ ಬಹುಶಃ 500 ವರ್ಷಗಳ ಕಾಲ ರಾಮ ಕಾದಿರಬೇಕು. ಸಂತನ ರೂಪದಲ್ಲಿ ಪ್ರಧಾನಿ ಮೋದಿ ಅವರು ಬಂದು ಈ ಸಮಾರಂಭ ಮಾಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು, ಕಳಂಕ ರಹಿತ, ರಾಮನ ಆದರ್ಶಗಳ ಪಾಲಿಸುವ ಮೂಲಕ ದೇಶದ ಅಭಿವೃದ್ಧಿ ಪಡಿಸುತ್ತಿದ್ದಾರೆ. ಪ್ರತಿಯೊಂದ ಮನೆಯಲ್ಲಿ ರಾಮ ನಮ್ಮ ಮನೆಗೆ ಬಂದ ಎಂಬ ಭಾವದಲ್ಲಿ ಸಾರ್ವಜನಿಕ ಆಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಜನರ ಸ್ವಯಂ ಪ್ರೇರಣೆಯಿಂದ 50 ಸಾವಿರ ಜನ ಅವಳಿನಗರದಲ್ಲಿ ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಜನರ ಭಾವನೆ ಹಾಗಿದೆ. ಭಕ್ತಿ ಭಾವನೆಯಿಂದ ಈ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಂಬರುವ ಐದು ವರ್ಷದಲ್ಲಿ ಭಾರತ ರಾಮ ರಾಜ್ಯವಾಗಲಿದೆ. ಕಾಂಗ್ರೆಸ್ ಪಕ್ಷ ಹಿಂದೂ ವಿಚಾರ ಬಂದಾಗ ವಿರೋಧ ಮಾಡುವುದು ಸಾಮಾನ್ಯ. ಈಗ ಅವರ ಪಕ್ಷದ ನಾಯಕರು ಗೊಂದಲದಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಹಿಂದೂ ವಿರೋಧಿಯಾಗಿದ್ದಾರೆ. ಅಯೋಧ್ಯೆಗೆ ಹೋಗಲ್ಲ ಅಂದವರು, ಜನ ಸ್ವೀಕಾರ ಮಾಡಿದ ಮೇಲೆ ಮತ ಬ್ಯಾಂಕ್ ಸಲುವಾಗಿ ಹೋಗುತ್ತೇನೆ ಎಂದು ತಿಳಿಸಿದರು.
ಕೆ.ಎಚ್. ಮುನಿಯಪ್ಪ ಅವರು ರಾಮ ಜಪ ಮಾಡುತ್ತಿರುವುದು ಸಂತೋಷವಾಗುತ್ತಿದೆ. ಇದನ್ನು ಮುಖ್ಯ ಮಂತ್ರಿಗೂ ಕಲಿಸಿಕೊಡಲಿ ಎಂದು ಹೇಳಿದರು.