ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ಹಿಂದುಯೇತರರು, ಇತರ ಧರ್ಮಗಳ ಜನರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನ ಮಧುರೈ ಶಾಖೆ ತೀರ್ಪು ನೀಡಿದೆ.
ಅದೇ ರೀತಿ ಹಿಂದುಯೇತರರಿಗೆ ಪ್ರವೇಶ ನಿಷೇಧ ಎಂಬ ಬ್ಯಾನರ್ ಗಳನ್ನು ದೇವಾಲಯದ ಆವರಣದ ಪ್ರವೇಶದ್ವಾರದಲ್ಲಿ ವಿವಿಧ ಸ್ಥಳಗಳಲ್ಲಿ ಹಾಕಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ದಿಂಡಿಗಲ್ ಜಿಲ್ಲೆಯ ಪಳನಿ ನಿವಾಸಿ ಸೆಂಥಿಲ್ ಕುಮಾರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮೇರೆಗೆ ಈ ಆದೇಶ ಹೊರಡಿಸಲಾಗಿದೆ.
ಪ್ರಸಿದ್ಧ ಪಳನಿ ಮುರುಗನ್ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ . ಈ ಪರಿಸ್ಥಿತಿಯಲ್ಲಿ, ಹಿಂದು ಧರ್ಮವನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಸೇರಿದ ಜನರು ಅಥವಾ ದೇವರನ್ನು ನಂಬದವರು ಸಹ ದೇವಾಲಯವನ್ನು ಪ್ರವೇಶಿಸುತ್ತಾರೆ, ಇದು ದೇವರನ್ನು ನಂಬುವವರಿಗೆ ನೋವುಂಟು ಮಾಡುತ್ತದೆ. ಆದ್ದರಿಂದ, ಹಿಂದುಯೇತರರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಬಾರದು.ಇತರ ಧರ್ಮಗಳ ಜನರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಹೇಳುವ ಬ್ಯಾನರ್ ಅನ್ನು ದೇವಾಲಯದ ಅನೇಕ ಭಾಗಗಳಲ್ಲಿ ಹಾಕಬೇಕೆಂದು ಅವರು ಒತ್ತಾಯಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ಮತಿ, ದೇವಾಲಯದ ಪ್ರವೇಶ ದ್ವಾರದಲ್ಲಿ ಹಾಜರಾತಿ ರಿಜಿಸ್ಟರ್ ಇಡುವಂತೆ ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ (ಎಚ್ಆರ್ ಮತ್ತು ಸಿಇ) ನಿರ್ದೇಶನ ನೀಡಿದರು.