ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಲೆ ಎತ್ತಲಿದೆ ‘ಬೃಹತ್ ಕೆಂಪೇಗೌಡ ವನ’

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ರಾಷ್ಟ್ರದ ಗಮನ ಸೆಳೆಯುವ ‘ಬೃಹತ್ ಕೆಂಪೇಗೌಡ ವನ ‘ ನಿರ್ಮಾಣವಾಗಲಿದೆ. ಬೆಂಗಳೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಲಹಂಕ ವ್ಯಾಪ್ತಿಯ ಬೆಟ್ಟಹಲಸೂರಿನಲ್ಲಿ 173 ಎಕರೆ ಪ್ರದೇಶದಲ್ಲಿ ಈ ಕೆಂಪೇಗೌಡ ವನ ತಲೆ ಎತ್ತಲಿದೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ , ಈ ವನದಲ್ಲಿ ದೇಶ- ವಿದೇಶಗಳಿಂದ ತರಿಸಿದ ಹಣ್ಣಿನ ಗಿಡಗಳು ಮತ್ತು ವಿವಿಧ ಜಾತಿಯ ಮರ, ಗಿಡಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದರು.

ಬೆಟ್ಟಹಲಸೂರಿನ ಈ ಭೂಮಿ ಸುಮಾರು 700 ಕೋಟಿ ರೂ. ಮೌಲ್ಯದ್ದಾಗಿದ್ದು, ಇದು ಭೂ ಮಾಫಿಯ ಕೈ ಸೇರದಂತೆ ನೋಡಿಕೊಳ್ಳಲು ಮತ್ತು ಬೆಂಗಳೂರಿನ ಉತ್ತರ ಭಾಗಕ್ಕೆ ಬೃಹತ್ ಉದ್ಯಾನವನ್ನು ನೀಡುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

ಹಳ್ಳಕೊಳ್ಳವನ್ನು ಬಳಸಿಕೊಂಡು ಕೆಂಪೇಗೌಡ ವನ ನಿರ್ಮಾಣ
ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬೆಟ್ಟಹಲಸೂರು ಬೆಟ್ಟ ಗುಡ್ಡಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಲಭ್ಯವಾದ ಕಲ್ಲುಗಳಿಂದಲೇ ನಾಡಿನ ಆಡಳಿತ ಕೇಂದ್ರ ವಿಧಾನಸೌಧವನ್ನು ನಿರ್ಮಿಸಲಾಗಿದೆ. ಈಗಲೂ ಬೆಟ್ಟಹಲಸೂರು ಪ್ರದೇಶದಲ್ಲಿ ಬೃಹತ್ ಬಂಡೆಗಳಿವೆ. ಮತ್ತು ಇಲ್ಲಿ ಗಣಿಗಾರಿಕೆ ಮಾಡಿದ ನಂತರ ಸಹಜವಾಗಿಯೇ ರೂಪುಗೊಂಡ ಹಳ್ಳ ಕೊಳ್ಳಗಳನ್ನು ಬಳಸಿಕೊಂಡು ಕೆಂಪೇಗೌಡ ವನವನ್ನು ವಿಶೇಷವಾಗಿ ನಿರ್ಮಿಸಲಾಗುವುದು ಎಂದು ಹೇಳಿದರು.

500 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ವನ ನಿರ್ಮಾಣ
ನಾಡಪ್ರಭು ಕೆಂಪೇಗೌಡರ ವಂಶಸ್ಥರು ಬೆಂಗಳೂರಿಗೆ ಬಂದಾಗ ಇಲ್ಲಿನ ಆವತಿ ಸಮೀಪ ನೆಲೆಸಿದ್ದರು. ಈ ಹಿನ್ನೆಲೆಯಲ್ಲಿ ಆವತಿಗೆ ಸಮೀಪದಲ್ಲಿರುವ ಬೆಟ್ಟಹಲಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಉದ್ಯಾನವನಕ್ಕೆ ಕೆಂಪೇಗೌಡರ ಹೆಸರು ಇಡಲು ತೀರ್ಮಾನಿಸಲಾಗಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಈ ಕೆಂಪೇಗೌಡ ವನ ತಲೆ ಎತ್ತಲಿದ್ದು, ರಾಷ್ಟ್ರದಲ್ಲೇ ಅತ್ಯಪರೂಪದ ಸ್ಥಳವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!