ಹೊಸ ದಿಗಂತ ವರದಿ, ಬಳ್ಳಾರಿ:
ನಗರದ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಮೊಬೈಲ್ ಬಳಕೆ, ನಿಷೇಧಿತ ವಸ್ತುಗಳ ಬಳಕೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರ ನೇತೃತ್ವದಲ್ಲಿ ಮಂಗಳವಾರ ದಿಢಿರ್ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.
ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾದ ಗಾಂಜಾ, ಮೊಬೈಲ್, ಸಿಮ್ ಕಾರ್ಡ್ ಗಳು ಹೇಗೆ ಬಳಸಲಾಗುತ್ತಿದೆ, ಸುತ್ತಲೂ ಸಾಕಷ್ಟು ಭದ್ರತೆ ಕಲ್ಪಿಸಿದ್ದರೂ ನಿಷೇಧಿತ ವಸ್ತುಗಳು ಖೈದಿಗಳಿಗೆ ತಲುಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರ ನೇತೃತ್ವದ 100ಜನರ ತಂಡ ದಿಢಿರ್ ದಾಳಿ ನಡೆಸಿ ಕಾರಾಗೃಹದ ಖೈದಿಗಳ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿತು.
ಈ ವೇಳೆ ಮೊಬೈಲ್, ಸಿಮ್ ಕಾರ್ಡ್ ಗಳು ದೊರೆತಿವೆ, ಜೊತೆಗೆ ಗಾಂಜಾ ಸೇರಿ ಇನ್ನಿತರ ವಸ್ತುಗಳು ದೊರೆತಿವೆ ಎಂದು ಹೇಳಲಾಗುತ್ತಿದೆ. ಆದರೇ, ಖಚಿತವಾಗಿಲ್ಲ. ಈ ಸಂದರ್ಭದಲ್ಲಿ ನಗರ ಡಿವೈಎಸ್ಪಿ ಬಸವರಾಜ್ ಕೆ., ಪಿಐಗಳಾದ ಶ್ರೀನಿವಾಸ್ ಮೇಟಿ, ಸಿದ್ದರಾಮೇಶ್ವರ, ಎಂ.ಎನ್.ಸಿಂಧೂರ್, ಖಡಕ್ ಅಧಿಕಾರಿ ವಾಸು ಕುಮಾರ್, ಬಸವರಾಜ್ ಪಾಟೀಲ್, ಗುಂಡೂರಾವ್, ಅಮರೇಶ ಹುಬ್ಬಳ್ಳಿ, ಅಮೋಘ್, ಗೋವಿಂದ್ ಅವರು ತಂಡದಲ್ಲಿದ್ದರು.
ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ, ಉಪ ಅಧೀಕ್ಷರಾದ ಅಮರೇಶ್ ಪೂಜಾರಿ ಸೇರಿದಂತೆ ಇತರರಿದ್ದರು. ಸಿಮ್ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡ ಡಿಎಸ್ಪಿ ಕೆ.ಬಸವರಾಜ್ ಅವರು ದೂರು ನೀಡಿದ್ದು, ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.