ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ತಗಾಂಗ್ ಬಂದರು ಪ್ರವೇಶಿಸುವ ಮೂಲಕ ಭಾರತ ಹಾಗೂ ಬಾಂಗ್ಲಾ ನಡುವಿನ ಸಂಪರ್ಕವನ್ನು ಹೆಚ್ಚಿಸಬಹುದು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಭಾರತದ ಈಶಾನ್ಯ ರಾಜ್ಯಗಳು ಚಿತ್ತಗಾಂಗ್ ಬಂದರನ್ನು ಪ್ರವೇಶಿಸಲು ಅನುಮತಿ ನೀಡಿದ್ದಾರೆ. ಎರಡೂ ದೇಶಗಳ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಭಾರತ ಬಂದರನ್ನು ಪ್ರವೇಶಿಸಬಹುದು ಎಂದು ಪ್ರಧಾನಿ ಹಸೀನಾ ಹೇಳಿದ್ದಾರೆ.
ಚಿತ್ತಗಾಂಗ್ ಅಥವಾ ಛಟೋಗ್ರಾಮ್ ಬಂದರು ಬಾಂಗ್ಲಾದೇಶದ ಪ್ರಮುಖ ಬಂದರುಗಳಲ್ಲಿ ಒಂದಾಗಿದ್ದು, ಇದು ಚಿತ್ತಗಾಂಗ್ ಬೆಟ್ಟಗಳ ಪ್ರದೇಶದಲ್ಲಿದೆ. ಸಮುದ್ರ ಬಂದರಿನ ಸಾಮೀಪ್ಯದಿಂದಾಗಿ ಈಶಾನ್ಯ ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಜಾಗತಿಕ ಹಡಗು ಮಾರ್ಗಗಳಿಗೆ ನಿಕಟ ಪ್ರವೇಶವನ್ನು ಒದಗಿಸುತ್ತದೆ.
2010 ರ ಆರಂಭದಲ್ಲಿ, ಭಾರತ ಮತ್ತು ಬಾಂಗ್ಲಾದೇಶವು ಚಿತ್ತಗಾಂಗ್ ಮತ್ತು ಮೊಂಗ್ಲಾ ಬಂದರುಗಳನ್ನು ಭಾರತದಿಂದ ಸರಕು ಸಾಗಣೆಗೆ ಬಳಸಲು ಅನುಮತಿಸುವ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದ್ದವು.
ಮೂರು ದಿನಗಳ ಬಾಂಗ್ಲಾ ಪ್ರವಾದಲ್ಲಿದ್ದ ಜೈ ಶಂಕರ್ ಅವರು ಅಲ್ಲಿನ ಪ್ರಧಾನಿಯವರನ್ನು ಭೇಟಿ ಮಾಡಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಜೊತೆಗೆ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನವನ್ನು ಪ್ರಧಾನಿ ಹಸೀನಾ ಅವರಿಗೆ ರವಾನಿಸಿದ್ದಾರೆ. ಹಾಗೂ ಈದ್ ನಂತರ ಎರಡು ದೇಶಗಳ ನಡುವೆ ಗಡಿಯಾಚೆಗಿನ ಬಸ್ ಮತ್ತು ರೈಲ್ವೆ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದರು.