ಟೀಂ ಇಂಡಿಯಾ ಆಟಗಾರರಿಗೆ ಟಫ್‌ ರೂಲ್ಸ್‌ ಹಾಕಿದ ಬಿಸಿಸಿಐ, ನಿಯಮ ತಪ್ಪಿದ್ರೆ ಔಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ನಮ್ಮ ನೆಲದಲ್ಲೇ 0-3 ಅಂತರದಿಂದ ಸೋತಿತು. ಇದಲ್ಲದೆ, ‘ಬಾರ್ಡರ್ ಗವಾಸ್ಕರ್ ಟ್ರೋಫಿ’ಯಲ್ಲೂ 1-3 ಅಂತರದಿಂದ ಸೋಲು ಅನುಭವಿಸಿತು. ಈ ಸೋಲಿನಿಂದಾಗಿ ಭಾರತ ವರ್ಲ್ಡ್​ ಟೆಸ್ಟ್ ಚಾಂಪಿಯನ್ಸ್​ ರೇಸ್​ನಿಂದ ಹೊರ ಬಿದ್ದಿದೆ. ಈ ಬೆನ್ನಲ್ಲೇ ಬಿಸಿಸಿಐ ಕಠಿಣ ನಿಯಮ ತರಲು ಮುಂದಾಗಿದೆ.

ಎಲ್ಲ ಆಟಗಾರರು ದೇಶಿಯ ಪಂದ್ಯಗಳನ್ನು ಆಡಲೇಬೇಕು ಎಂದು ಬಿಸಿಸಿಐ ಹೇಳಿದೆ. ಇದರಿಂದ ಆಟಗಾರರು ಫಾರ್ಮ್ ಉಳಿಸಿಕೊಳ್ಳಲು, ತರಬೇತಿ ಪಡೆಯಲು ಸಹಾಯ ಆಗುತ್ತದೆ. ತಪ್ಪುಗಳನ್ನು ತಿದ್ದಿಕೊಳ್ಳಲು ದೇಶಿಯ ಸರಣಿ ಸಹಕಾರಿ ಆಗಲಿದೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಪ್ರ್ಯಾಕ್ಟೀಸ್ ಮ್ಯಾಚ್​​ಗಳಿಗೆ ಕೆಲ ಆಟಗಾರರು ಪ್ರತ್ಯೇಕವಾಗಿ ಬರುತ್ತಿದ್ದರು. ಇದಕ್ಕೆ ಈಗ ಕಡಿವಾಣ ಹಾಕಲಾಗಿದೆ. ಈ ಮೂಲಕ ಶಿಸ್ತನ್ನು ತರಲು ಬಿಸಿಸಿಐ ಪ್ರಯತ್ನಿಸಿದೆ. ತೀರ ಅಗತ್ಯ ಬಿದ್ದಲ್ಲಿ ಹೆಡ್ ಕೋಚ್​ನ ಅನುಮತಿ ಪಡೆಯಬೇಕು.

ಬ್ಯಾಗೇಜ್ ಪಾಲಿಸಿಯನ್ನು ಕೂಡ ತರಲಾಗಿದ್ದು, ಆಟಗಾರರು ನಿಗದಪಡಿಸಿದ ತೂಕದಲ್ಲೇ ಬ್ಯಾಗ್​ನ ತರಬೇಕು. ಆಟಗಾರರು ಕರೆತರುವ ಮ್ಯಾನೇಜರ್​ಗಳು, ಬಾಣಸಿಗ ಅವರೆಲ್ಲರಿಗೂ ಕಡಿವಾಣ ಹಾಕಲಾಗಿದೆ.

ಇನ್ನು ತರಬೇತಿ ವೇಳೆ ಎಲ್ಲರೂ ಹಾಜರಿ ಹಾಕಬೇಕು. ಸರಿಯಾದ ಸಮಯಕ್ಕೆ ಇರುವುದು ಕೂಡ ಕಡ್ಡಾಯ. ಸೀರಿಸ್ ವೇಳೆ ಜಾಹೀರಾತು ಶೂಟಿಂಗ್ ಹಾಗೂ ಬ್ರ್ಯಾಂಡ್​ಗಳ ಪ್ರಚಾರಕ್ಕೆ ಬ್ರೇಕ್ ಪಡೆಯುವುದರ ಮೇಲೆ ಕಡಿವಾಣ ಹಾಕಲಾಗಿದೆ. ಈ ಮೂಲಕ ಕ್ರಿಕೆಟ್ ಮೇಲೆ ಆಟಗಾರರ ಗಮನ ಹರಿಸಬೇಕು.

ಸರಣಿ ವೇಳೆ ಕುಟುಂಬದವರ ಭೇಟಿಗೂ ಹಲವು ಷರತ್ತುಗಳನ್ನು ಬಿಸಿಸಿಐ ತಂದಿದೆ. 45 ದಿನಕ್ಕೂ ಅಧಿಕ ದಿನ ಆಟಗಾರರು ವಿದೇಶದಲ್ಲಿ ನಡೆಯುವ ಸರಣಿಗಾಗಿ ಇರುತ್ತಾರೆ ಎಂದರೆ ಪತ್ನಿ ಹಾಗೂ ಮಗು (18 ವರ್ಷಕ್ಕಿಂತ ಸಣ್ಣವರು) ಭೇಟಿ ಮಾಡಬಹುದು ಮತ್ತು ಎರಡು ವಾರ ಮಾತ್ರ ಇರಬಹುದು.

ಬಿಸಿಸಿಐ ನಡೆಸುವ ಶೂಟ್, ಪ್ರಮೋಷನಲ್ ಆ್ಯಕ್ಟಿವಿಟಿಯಲ್ಲಿ ಆಟಗಾರರು ಭಾಗಿ ಆಗಲೇಬೇಕು. ಪಂದ್ಯ ನಿಗದಿಪಡಿಸಿದ ಸಮಯಕ್ಕಿಂತ ಮೊದಲೇ ಪೂರ್ಣಗೊಂಡರೂ ಆಟಗಾರರು ತಂಡದ ಜೊತೆ ಇರಲೇಬೇಕು ಎಂಬ ನಿಯಮ ಇದೆ.

ಈ ನಿಯಮಗಳನ್ನು ಆಟಗಾರರು ಪಾಲಿಸಲೇಬೇಕು. ಒಂದೊಮ್ಮೆ ನಿಯಮ ಪಾಲನೆ ಮಾಡದೆ ಇದ್ದರೆ ಅಂಥ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಸಿಸಿಐಗೆ ಅಧಿಕಾರ ಇರಲಿದೆ. ಐಪಿಎಲ್ ಸೇರಿ ಬಿಸಿಸಿಐ ನಡೆಸುವ ಎಲ್ಲಾ ಟೂರ್ನ್​ಮೆಂಟ್​ನಿಂದ ಆಟಗಾರರನ್ನು ಹೊರಕ್ಕೆ ಇಡುವ ಅಧಿಕಾರವೂ ಇದರಲ್ಲಿ ಇರಲಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!