ಹೊಸದಿಗಂತ ಡಿಜಿಟಲ್ ಡೆಸ್ಕ್
ಮೊಣಕಾಲಿನ ಗಾಯಕ್ಕೀಡಾಗಿರುವುದರಿಂದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಕಾಣಿಸಿಕೊಳ್ಳುವುದು ಅನುಮಾನವಾಗಿದೆ. ಜಡೇಜಾ ಸ್ವತಃ ತಾವೇ ಮಾಡಿಕೊಂಡ ಎಡವಟ್ಟೊಂದರ ಫಲವಾಗಿ ಗಾಯಕ್ಕೆ ತುತ್ತಾಗಿದ್ದು, ಈ ವಿಚಾರ ತಿಳಿಯುತ್ತಲೇ ಬಿಸಿಸಿಐ ಗರಂ ಆಗಿದೆ.
ಜಡೇಜಾ ಏಷ್ಯಾಕಪ್ ನಲ್ಲಿ ಗಾಯಗೊಳ್ಳುವವರೆಗೂ ಉತ್ತಮವಾಗಿ ಆಡಿದ್ದರು. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ, ಮ್ಯಾಚ್-ವಿನ್ನಿಂಗ್ 35 ರನ್ ಹಾಗೂ ಎರಡು ಓವರ್ಗಳಲ್ಲಿ 0/11 ನೀಡಿದ್ದರು. ಹಾಂಗ್ ಕಾಂಗ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡದಿದ್ದರೂ 15 ರನ್ ಗೆ ಒಂದು ವಿಕೆಟ್ ಕಬಳಿಸಿದ್ದರು. ಜಡೇಜಾ ಹೊರಬಿದ್ದ ಬಳಿಕ ಟೀಂ ಇಂಡಿಯಾ ತಂಡದ ಸಂಯೋಜನೆಯಲ್ಲಿ ವ್ಯತ್ಯಾಸವಾಗಿ ಸೂಪರ್ 4 ಹಂತದಿಂದಲೇ ಹೊರಬಿದ್ದಿತ್ತು. ಈ ನಡುವೆ ತಿಳಿದುಬಂದ ವಿಚಾರವೆಂದರೆ ಜಡೇಜಾ ಮೈದಾನದಲ್ಲಿ ಗಾಯಗೊಂಡಿಲ್ಲ. ಬದಲಾಗಿ ಜಲ ಕ್ರೀಡೆ ಆಡುವಾಗ ಮಾಡಿಕೊಂಡಿದ್ದ ಪೆಟ್ಟು ಪಂದ್ಯವಾಡುವಾಗ ಗಂಭೀರವಾಗಿ ಉಲ್ಭಣಿಸಿ ತಂಡದಿಂದ ಹೊರಗುಳಿದಿದ್ದಾರೆ. ಈ ವಿಚಾರವಾಗಿ ಬಿಸಿಸಿಐ ಕೆಂಡಾಮಂಡಲವಾಗಿದೆ.
“ಜಡೇಜಾ ನಡವಳಿಕೆಯಿಂದ ನಾವು ಸಂತೋಷವಾಗಿಲ್ಲ, ಅವರು ಸಾಹಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮುನ್ನ ಮುಂದಿನ ವಿಶ್ವಕಪ್ ಅನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿತ್ತು. ಆದರೆ ಈ ವಿಚಾರವಾಗಿ ಜವಾಬ್ದಾರಿಯುತವಾಗಿ ವರ್ತಿಸಲಿಲ್ಲ ಮತ್ತು ವಿಶ್ವಕಪ್ ಹತ್ತಿರದ ಹಾದಿಯಲ್ಲಿದೆ ಎಂದು ಭಾವಿಸಲಿಲ್ಲ. ಜಡೇಜಾ ಅವರ ಈ ನಡವಳಿಕೆ ಬೇಸರ ತರಿಸಿದೆʼ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬೇಸರ ಹೊರಹಾಕಿದ್ದಾರೆ.
ಮಂಗಳವಾರ ಜಡೇಜಾ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆಲ್ರೌಂಡರ್ ಶೀಘ್ರದಲ್ಲೇ ಪುನರ್ವಸತಿ ಪ್ರಾರಂಭಿಸಲಿದ್ದಾರೆ. ಟಿ 20 ವಿಶ್ವಕಪ್ ಗೆ ಮುನ್ನ ಜಡೇಜಾ ಮೈದಾನಕ್ಕೆ ಮರಳುವ ನಿರೀಕ್ಷೆಯಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ