May 3, 2026
Sunday, May 3, 2026
spot_img

ಬಿಸಿಸಿಐ vs ಬಿಸಿಬಿ ಸಮರ: ಅಂಡರ್-19 ವಿಶ್ವಕಪ್‌ನಲ್ಲಿ ಸ್ಫೋಟಗೊಂಡ ಹಳೆಯ ಸೇಡು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಕೇವಲ ಬ್ಯಾಟ್ ಮತ್ತು ಬಾಲ್ ಮಾತ್ರವಲ್ಲ, ಆಟಗಾರರ ನಡುವಿನ ವರ್ತನೆಯೂ ಈಗ ಚರ್ಚೆಯಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಮಳೆಯಿಂದಾಗಿ ಅಡಚಣೆ ಅನುಭವಿಸಿದರೂ, ಟಾಸ್ ವೇಳೆ ನಡೆದ ಒಂದು ಘಟನೆ ಮಾತ್ರ ಕ್ರಿಕೆಟ್ ಲೋಕದಲ್ಲಿ ಹೊಸ ವಿವಾದದ ಬಿರುಗಾಳಿ ಎಬ್ಬಿಸಿದೆ.

ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದ ನಂತರ ಸಾಂಪ್ರದಾಯಿಕವಾಗಿ ಇಬ್ಬರೂ ತಂಡದ ನಾಯಕರು ಕೈಕುಲುಕುವುದು ವಾಡಿಕೆ. ಬಾಂಗ್ಲಾದೇಶದ ನಾಯಕ ಸೌಜನ್ಯದಿಂದ ಕೈ ಚಾಚಿದರೂ, ಭಾರತದ ನಾಯಕ ಆಯುಷ್ ಮ್ಹಾತ್ರೆ ಮಾತ್ರ ಕೈಕುಲುಕಲು ನಿರಾಕರಿಸಿ ಹಿಂದೆ ಸರಿದರು. ಈ ಅನಿರೀಕ್ಷಿತ ಬೆಳವಣಿಗೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾ ಸ್ಫೂರ್ತಿಯ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

ಈ ಘಟನೆಯು ಕಳೆದ ವರ್ಷ (2025) ಏಷ್ಯಾಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ನಡುವೆ ನಡೆದ ಹ್ಯಾಂಡ್‌ಶೇಕ್ ವಿವಾದವನ್ನು ನೆನಪಿಸಿದೆ. ಆಗ ಶುರುವಾದ ಈ ‘ನೋ ಹ್ಯಾಂಡ್‌ಶೇಕ್’ ಟ್ರೆಂಡ್ ಈಗ ಬಾಂಗ್ಲಾದೇಶದ ವಿರುದ್ಧವೂ ಮುಂದುವರಿಯುತ್ತಿರುವುದು ಗಂಭೀರ ವಿಚಾರವಾಗಿದೆ.

ಒಟ್ಟಾರೆಯಾಗಿ, ಮೈದಾನದ ಹೊರಗಿನ ಈ ರಾಜಕೀಯ ಮತ್ತು ಆಡಳಿತಾತ್ಮಕ ಸಂಘರ್ಷಗಳು ಈಗ ಯುವ ಆಟಗಾರರ ಮೇಲೂ ಪ್ರಭಾವ ಬೀರುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮುಂಬರುವ ದಿನಗಳಲ್ಲಿ ಐಸಿಸಿ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !